ಮಂಗಳೂರು: ಗುರುಪುರ ಸಮೀಪದ ಉಳಾಯಿಬೆಟ್ಟು ಎಂಬಲ್ಲಿ ಯುವಕರ ತಂಡವೊಂದು ಶುಕ್ರವಾರ ತಡರಾತ್ರಿ ದತ್ತಪೀಠ ಮಾಲಾಧಾರಿಗಳು ಸಂಚರಿಸುತ್ತಿದ್ದ ವಾಹನಕ್ಕೆ ಕಲ್ಲು ತೂರಾಟ ನಡೆಸಿ ಹಲವರು ಗಂಭೀರಾ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ ಘಟನೆ ನಡೆದಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಶನಿವಾರ ಬೆಳಗ್ಗೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ವಾಮಂಜೂರಿನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಎಸಿಪಿ ಪವನ್ ನೆಜ್ಜೂರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ಪ್ರತಿದೂರು: ಉಳಾಯಿಬೆಟ್ಟು ಹಾಗೂ ವಾಮಂಜೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಅಕ್ರಮ ಕೂಟ ಸೇರಿ ನಮ್ಮ ವಿರುದ್ಧ ಹಲ್ಲೆ ನಡೆಸಿದ್ದಾರೆ ಎಂದು ಮುಸ್ಲಿಂ ಯುವಕರ ತಂಡವೊಂದ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಉಳಾಯಿಬೆಟ್ಟು ಸಮೀಪದ ಮುಸ್ಲಿಂ ಸಮುದಾಯದವರೊಬ್ಬರ ಮನೆಗೆ ಆರೋಪಿಗಳ ಬಂಧನದ ನೆಪದಲ್ಲಿ ಪೊಲೀಸರೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಬಗ್ಗೆ ಮನೆಯವರು ಆರೋಪಿಸಿದ್ದಾರೆ. ಟಿವಿ ಸೇರಿದಂತೆ ಬೆಲೆಬಾಳುವ ಸೊತ್ತುಗಳಿಗೆ ಹಾನಿ ಮಾಡಿದೆ. ಅಲ್ಲದೆ ವಾಮಂಜೂರು ಮಸೀದಿಗೆ ಕಲ್ಲು ತೂರಿ ಹಾನಿ ಮಾಡಿದೆ ಎಂದು ದೂರು ನೀಡಲಾಗಿದೆ. ಇತ್ತಂಡಗಳ ದೂರನ್ನು ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಾನುವಾರ ರಾತ್ರಿ ಒಳಗಡೆ ಕಲ್ಲು ತೂರಾಟ ನಡೆಸಿದ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದರೆ ಸೋಮವಾರ ವಾಮಂಜೂರು, ಗುರುಪುರ, ಉಳಾಯಿಬೆಟ್ಟು ಪರಿಸರವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಸಂಘಟನೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದು, ವಾಮಂಜೂರು, ಉಳಾಯಿಬೆಟ್ಟು ಪರಿಸರದಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.
ಗುರುಪುರ ವಲಯ ಬಂದ್ಗೆ ಕರೆ:
ಉಳಾಯಿಬೆಟ್ಟು ಸಮೀಪ ಶುಕ್ರವಾರ ರಾತ್ರಿ ದತ್ತಮಾಲಾಧಾರಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಡಿ.8ರಂದು ಗುರುಪುರ ವಲಯ ಬಂದ್ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕರೆ ನೀಡಿದೆ. ಬಜಪೆ, ಕೈಕಂಬ, ಅಡ್ಡೂರು ಹಾಗೂ ನೀರುಮಾರ್ಗವನ್ನೊಳಗೊಂಡ ಪಿರ್ಕ ಬಂದ್ಗೆ ಕರೆ ನೀಡಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ಗುರುಪುರ ಪರಾರಿ ಜಂಕ್ಷನ್ನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ವಿಎಚ್ಪಿ ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ ಹಾಗೂ ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 28 ಮಂದಿ ವಶಕ್ಕೆ: ಉಳಾಯಿಬೆಟ್ಟು ಘಟನೆಗೆ ಸಂಬಂಧಿಸಿದಂತೆ ಎರಡು ತಂಡಗಳ ಸುಮಾರು 25 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಹಿಂದಿನ ವರದಿ :
ದತ್ತಪೀಠ ಮಾಲಾಧಾರಿಗಳ ವಾಹನಕ್ಕೆ ಕಲ್ಲು ತೂರಾಟ : ಹಲವರಿಗೆ ಗಾಯ : ಪರಿಸರದಲ್ಲಿ ಉದ್ವಿಗ್ನ ಸ್ಥಿತಿ
ಗುರುಪುರ ಸಮೀಪದ ಉಳಾಯಿಬೆಟ್ಟು ಎಂಬಲ್ಲಿ ಯುವಕರ ತಂಡವೊಂದು ಶುಕ್ರವಾರ ತಡರಾತ್ರಿ ದತ್ತಪೀಠ ಮಾಲಾಧಾರಿಗಳು ಸಂಚರಿಸುತ್ತಿದ್ದ ವಾಹನಕ್ಕೆ ಕಲ್ಲು ತೂರಾಟ ನಡೆಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಡೆಯಲಿರುವ ದತ್ತ ಜಯಂತಿ ಉತ್ಸವ ಹಿನ್ನೆಲೆಯಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ನ ತಂಡ ಉಳಾಯಿಬೆಟ್ಟು ಪೆರ್ಮಂಕಿಯ ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂದಿರದಲ್ಲಿ ಮಾಲೆಧರಿಸಿ ಶುಕ್ರವಾರ ರಾತ್ರಿ ಮಿನಿ ಬಸ್ನಲ್ಲಿ ಚಿಕ್ಕಮಗಳೂರಿನತ್ತ ಪ್ರಯಾಣ ಬೆಳೆಸಿತ್ತು. ಈ ಸಂದರ್ಭ ಮಿನಿ ಬಸ್ನ ಹಿಂದೆ ಬೈಕ್ನಲ್ಲಿ ತೆರಳುತ್ತಿದ್ದ ಪ್ರವೀಣ್ ಮತ್ತು ಯಶೋಧರ್ ಎಂಬವರಿಗೆ ತಂಡವೊಂದ ಅಡ್ಡಗಟ್ಟಿ ಹಲ್ಲೆ ನಡೆಸಿತ್ತು.
ಇದಾದ ಬಳಿಕ ಹಲ್ಲೆ ನಡೆಸಿದ ಬಗ್ಗೆ ಇವರಿಬ್ಬರು ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಅದರಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಘಟನೆ ನಡೆದ ಸ್ಥಳಕ್ಕೆ ತೆರಳಿದಾಗ ಅಲ್ಲಿ ಸೇರಿದ್ದ ಸುಮಾರು 300ಕ್ಕೂ ಅಧಿಕ ಮಂದಿ ಮತ್ತೊಂದು ಕೋಮಿನ ಕಾರ್ಯಕರ್ತರು ಬೈಕ್ ಹಾಗೂ ರಿಕ್ಷಾವನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಇವರಲ್ಲಿ ವಿಶ್ವನಾಥ ಸಲ್ಲಜೆ ಹಾಗೂ ಆಚೆಬೈಲ್ಗುಡ್ಡೆ ನಿವಾಸಿ ಯಶೋಧರ್ ಎಂಬವರಿಗೆ ತಲವಾರಿನಿಂದ ಹಲ್ಲೆ ನಡೆಸಲಾಗಿದೆ.
ಬಳಿಕ ಎರಡು ತಂಡಗಳ ನಡುವೆ ಮಾರಾಮಾರಿ ನಡೆದು ಕಲ್ಲು ತೂರಾಟ ನಡೆಯಿತು. ಘಟನೆಯಲ್ಲಿ ಆರೆಸ್ಸೆಸ್ ಜಿಲ್ಲಾ ಪ್ರಮುಖ್ ಗಂಗಾಧರ್ ಪೆರ್ಮಂಕಿ, ಶಿವರಾತ್ರಿಬೆಟ್ಟು ನಿವಾಸಿಗಳಾದ ಮನೋಹರ್, ಪ್ರವೀಣ್, ಸುಹಾಸ್, ಸೌಮ್ಯ, ಬಬಿತ, ದರಿಬಾಗಿಲು ನಿವಾಸಿಗಳಾದ ಜಗದೀಶ್, ಸಂತೋಷ್ ಭಂಡಾರಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಡರಾತ್ರಿ ವಾಮಂಜೂರಿನ ಹೆದ್ದಾರಿಯಲ್ಲಿ ಗುಂಪು ಸೇರಿದ ಯುವಕರ ತಂಡ ವಾಹನಗಳಿಗೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿವೆ. ಮೂರು ಬೈಕ್ ಎರಡು ರಿಕ್ಷಾಗಳು ಜಖಂಗೊಂಡಿವೆ. ಕೆಲವು ಮನೆಗಳ ಮೇಲೂ ದಾಳಿ ನಡೆದಿದೆ. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ತಡರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವಾನ ಹೇಳಿದರು.
ಘಟನೆಯ ನಡೆದ ತಕ್ಷಣ ಕಂಕನಾಡಿ ಠಾಣೆ ಇನ್ಸ್ಪೆಕ್ಟರ್ ರಾಜೇಶ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಬಳಿಕ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ, ಎಸಿಪಿ ಪವನ್ ನೆಜ್ಜೂರ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.