ಮಂಗಳೂರು,ಫೆ.04 : ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಮಂಗಳವಾರ ಬೆಳಗ್ಗೆ ಬಂದ ಕಾಸರಗೋಡು ಜಿಲ್ಲೆಯ ಕೆ.ಮೊಹಮ್ಮದ್ ಸಮೀರ್ ಎಂಬಾತ ತನ್ನ ಗುದದ್ವಾರದಲ್ಲಿ ಚಿನ್ನದ ಬಿಸ್ಕೆಟ್ಗಳನ್ನಿಟ್ಟು ಕಳ್ಳ ಸಾಗಾಟ ಮಾಡಲೆತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಈತ ತನ್ನ ಗುದದ್ವಾರದಲ್ಲಿ 5 ಚಿನ್ನದ ಬಿಸ್ಕೆಟ್ಗಳನ್ನು ಅಕ್ರಮವಾಗಿ ಸಾಗಿಸಲೆತ್ನಿಸಿದ್ದು . ಈತನ ಬಗ್ಗೆ ಅನುಮಾನಗೊಂಡ ನಗರದ ಕಂದಾಯ ಗುಪ್ತಚರ ನಿರ್ದೇಶನಾಲದ ಅಧಿಕಾರಿಗಳು (ಡಿಆರ್ಐ) ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಸಂದರ್ಭ ಆತನಲ್ಲಿ ಚಿನ್ನ ಇರುವುದು ಗೊತ್ತಾಗಿದ್ದರೂ ಅವುಗಳನ್ನು ಎಲ್ಲಿ ಅಡಗಿಸಿಟ್ಟಿದ್ದಾನೆ ಎಂಬುದು ಪತ್ತೆಯಾಗಿಲ್ಲ. ಕೊನೆಗೆ ಆತನನ್ನು ಕೋರ್ಟ್ಗೆ ಹಾಜರುಪಡಿಸಿ ಆಸ್ಪತ್ರೆಯಲ್ಲಿ ಪರೀಕ್ಷಿಸಲು ಅನುಮತಿ ಕೇಳಲಾಯಿತು. ಕೋರ್ಟ್ ಅನುಮತಿ ಪಡೆದ ಡಿಆರ್ಐ ಅಧಿಕಾರಿಗಳು ಆರೋಪಿಯನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ಆತನನ್ನು ಪರೀಕ್ಷೆಗೆ ಒಳಪಡಿಸಲಾಯಿತು.
ಆಸ್ಪತ್ರೆಯಲ್ಲೂ ವೈದ್ಯರ ಬಳಿ ಆತ ಸತ್ಯವನ್ನು ಮುಚ್ಚಿಟ್ಟಿದ್ದ. ಬಳಿಕ ವೈದ್ಯರು ತಪಾಸಣೆ ನಡೆಸಿದಾಗ ಆತನ ದೇಹದಲ್ಲಿ ಲೋಹದ ವಸ್ತು ಇರುವುದು ಪತ್ತೆಯಾಗಿತ್ತು. ಬಳಿಕ ಸ್ಕ್ಯಾನಿಂಗ್ ಮೂಲಕ ತಪಾಸಣೆ ನಡೆಸಿದಾಗ ಆತನ ಗುದದ್ವಾರದಲ್ಲಿ ಇಟ್ಟಿದ್ದ 5 ಚಿನ್ನದ ಬಿಸ್ಕೆಟ್ಗಳು ಪತ್ತೆಯಾಗಿದ್ದವು. ಬಳಿಕ ಅವುಗಳನ್ನು ವೈದ್ಯರು ಹೊರತೆಗೆದು ಡಿಆರ್ಐ ಅಧಿಕಾರಿಗಳ ವಶಕ್ಕೆ ನೀಡಿದರು.
ಒಟ್ಟು 16.33 ಲಕ್ಷ ರೂ. ಮೌಲ್ಯದ 583 ಗ್ರಾಂ ತೂಕದ ಚಿನ್ನದ ಬಿಸ್ಕೆಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಮೊಹಮ್ಮದ್ ಸಮೀರ್ ದುಬೈಯಿಂದ ಕೇರಳಕ್ಕೆ ಚಿನ್ನವನ್ನು ಸಾಗಿಸುವ ಸೂತ್ರದಾರ ಎಂದು ಡಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.