ಮಂಗಳೂರು,ಮಾರ್ಚ್.13 : ಆಧುನಿಕ ಅಗತ್ಯಗಳಿಗೆ ತಕ್ಕಂತೆ ವಿಸ್ತರಿಸಿಕೊಳ್ಳುತ್ತಿರುವ ಕಾನೂನು ಕ್ಷೇತ್ರ ವ್ಯಾಪಕ ಅವಕಾಶಗಳನ್ನು ಪರಿಚಯಿಸುತ್ತಿದೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಜಿ. ಉಮಾ ಹೇಳಿದರು. ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕಾಲೇಜಿನ ಆವರಣದಲ್ಲಿ ಗುರುವಾರ ನಡೆದ ರಾಷ್ಟ್ರ ಮಟ್ಟದ ಕಾನೂನು ಉತ್ಸವ ‘ವಿಕ್ಟೋರಿಯಾ ಐರಿಸ್ 2015’ ಉದ್ಘಾಟಿಸಿ ಅವರು ಮಾತನಾಡಿದರು.
ಸಿವಿಲ್ ವಿಭಾಗದಲ್ಲಿ ಕಾರ್ಮಿಕ ಕಾನೂನು, ಗ್ರಾಹಕ, ವಾಹನ ವಿಮೆ, ಕಂಪನಿ ಲಾ, ಪಿಐಎಲ್ ಹೀಗೆ ಕಾನೂನು ಕ್ಷೇತ್ರದಲ್ಲಿ ನಾನಾ ವೃತ್ತಿಪರ ಶಾಖೆಗಳು ಆರಂಭಗೊಂಡಿವೆ. ಕ್ರಿಮಿನಲ್ ವಿಭಾಗದಲ್ಲಿ ಬೇಲ್ ಪಿಟಿಶನ್, ಭ್ರಷ್ಟಾಚಾರ ಪ್ರಕರಣ ಹೀಗೆ ನಾನಾ ಕ್ಷೇತ್ರದ ತಜ್ಞತೆ ಇದ್ದವರ ಸೇವೆಯ ಅವಕಾಶ ಇದೆ. ಇದಕ್ಕೆ ಕಾಲೇಜಿನ ಇಂತಹ ಸ್ಪರ್ಧೆಗಳು ಪೂರಕವಾಗಿವೆ ಎಂದರು.
ಕೌಟುಂಬಿಕ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬೈಲೂರು ಶಂಕರರಾಮ ಮಾತನಾಡಿ, ಕಾನೂನು ವೃತ್ತಿಯಲ್ಲಿ ಎಲ್ಲ ಕ್ಷೇತ್ರದ ಜ್ಞಾನವನ್ನು ಪಡೆದುಕೊಳ್ಳುವುದು ಪ್ರಸಕ್ತ ಪರಿಸ್ಥಿತಿಯ ಅಗತ್ಯವಾಗಿದೆ. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಆಧುನಿಕ ಸೌಲಭ್ಯಗಳಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಮಂಗಳೂರು ಬಾರ್ ಕೌನ್ಸಿಲ್ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಮಾತನಾಡಿ, ಬದಲಾದ ಪರಿಸ್ಥಿತಿಗೆ ಪೂರಕವಾಗಿ ಕಾನೂನು ಬದಲಾಗುತ್ತಿದೆ. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಕಾನೂನು ಜ್ಞಾನ ವೃದ್ಧಿಸುತ್ತಾ ಹೋಗಬೇಕು ಎಂದರು. ಮಣಿಪಾಲ ವಿಶ್ವವಿದ್ಯಾಲಯದ ಪ್ರೊ ವೈಸ್ ಚಾನ್ಸ್ಲರ್ ಡಾ. ಎಚ್. ವಿನೋದ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಸಂಚಾಲಕ ಡಾ. ತಾರಾನಾಥ್, ಸಹ ಸಂಚಾಲಕರಾದ ಸಂತೋಷ್ ಪ್ರಭು, ರಕ್ಷಿತ್ ಬಿ.ವಿ., ಮೂಟ್ ಕೋರ್ಟ್ ಸೊಸೈಟಿಯ ಉಪಾಧ್ಯಕ್ಷ ಚಿರಾಗ್ ಆರಿಗ, ಲೈನಲ್ ತೌರೊ, ಸುಮಿತ್ ಎಸ್. ಭಟ್, ಸುಮಿತ್ ಎಸ್. ಭಟ್, ಅಂಜಲಿ ಮೆನನ್ ಉಪಸ್ಥಿತರಿದ್ದರು. ಪ್ರಿನ್ಸಿಪಾಲ್ ಡಾ.ಪಿ.ಡಿ. ಸೆಬಾಸ್ಟಿಯನ್ ಸ್ವಾಗತಿಸಿದರು. ರೌನಕ್ ನಾಯಕ್ ವಂದಿಸಿದರು. ದೇಶದ 14 ಕಾಲೇಜುಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ.