ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಹಾಡ ಹಗಲೇ ಗೋಪಾಡಿ ಬೀಚ್ ರಸ್ತೆ ಒಂಟಿ ಮನೆಯ ನಿವಾಸಿ ಆರೂವರೆ ತಿಂಗಳ ಗರ್ಭಿಣಿ ಇಂದಿರಾ ಮೊಗವೀರ(30) ಮಹಿಳೆಯನ್ನು ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಘಟನೆ ಶನಿವಾರ ಸಂಜೆ ನಡೆದಿದ್ದು, ಮೃತ ಇಂದಿರಾಳ ಮನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭೇಟಿ ನೀಡಿ ಮೃತಳ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ಬಗ್ಗೆ ಅತೀವ ದುಃಖವಾಗಿದೆ, ಮೃತರ ಕುಟುಂಬದ ಪರಿಸ್ಥಿತಿ ಹಾಗು ಬಡತನದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರ ಪರಿಹಾರ ನಿಧಿಯಿಂದ ಇಂದಿರಾ ಅವರ ಮಗುವಿನ ಭವಿಷ್ಯಕ್ಕೆ ಪೂರಕವಾಗಿ ಪರಿಹಾರಧನವನ್ನು ಕೊಡಿಸುವ ಭರವಸೆ ನೀಡಿದರು. ಇನ್ನು ಇಂದಿರಾ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಶೀಘ್ರವೇ ಬಂಧಿಸಿ ವಿಚಾರಣೆ ನಡೆಸಿದ್ದಾರೆ, ಪ್ರಕರಣದಲ್ಲಿ ಇನ್ನು ಕೆಲವರ ಪಾತ್ರವಿರುವ ಬಗ್ಗೆ ಸ್ಥಳೀಯರು ಹಾಗೂ ಮಹಿಳಾ ಸಂಘಟನೆಗಲೂ ಆರೋಪಿಸಿದ್ದು ಇದರ ಬಗ್ಗೆ ಕೂಲಂಕುಷ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ ಅವರು ಈ ಭಾಗದಲ್ಲಿ ಹಾಗು ಸಮುದ್ರ ತೀರಗಳಲ್ಲಿ ಕೆಲವರು ಅನೈತಿಕ ಚಟುವಟಿಕೆಗಳನ್ನು ನಡೆಸಿ ಕಾನೂನು ಸುವ್ಯವಸ್ತೆ ಹದಗೆಡಿಸುವ ಪ್ರಯತ್ನ ನಡೆಸುತ್ತಿರುವ ಬಗ್ಗೆಯು ಸ್ಥಳೀಯರ ಆರೋಪವಿದ್ದು ಇಂತವರ ವಿರುದ್ಧ ಕಠಿಣ ಕ್ರಮಕ್ಕೆ ಇಲಾಖೆಗೆ ಸೂಚಿಸುತ್ತೇನೆ ಎಂದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಇಂತಹ ಘಟನೆ ನಡೆಯಬಾರದಿತ್ತು, ಬಡಕುಟುಂಬ ತೀರಾ ಸಂಕಷ್ಟದಲ್ಲಿರುವ ಬಗ್ಗೆ ತಿಳಿದಿದೆ, ಕುಟುಂಬದ ಜೊತೆಗಿದ್ದು ಸಹಕಾರ ನಿಡುವುದಾಗಿ ಹೇಳಿದರು.
ಸಚಿವ ಸೊರಕೆ ಮೃತ ಇಂದಿರಾ ಅವರ ಮಗ ಅನ್ವಿತ್ನನ್ನು ಎತ್ತಿಕೊಂಡು ಮೃತಳ ಪತಿಗೆ ಸಮಾಧಾನ ಹೇಳಿದರು. ಜಮಾಯಿಸಿದ್ದ ಹಲವರು ಸಚಿವರ ಬಳಿ ಘಟನೆ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಂ ಶೆಟ್ಟಿ, ಸಮಾಜ ಸೇವಕ ಗಣೇಶ ಪುತ್ರನ್, ಮೂಕಾಂಬಿಕಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ರಾಧಾದಾಸ್ ಕುಂಭಾಶಿ, ಮೊಗವೀರ ಯುವಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಅಶೋಕ ತೆಕ್ಕಟ್ಟೆ, ಗೌರವಾಧ್ಯಕ್ಷ ಸತೀಶ ಎಂ. ನಾಯ್ಕ್, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಉಪನಿರೀಕ್ಷಕ ನಾಸೀರ್ ಹುಸೇನ್ ಮೊದಲಾದವರಿದ್ದರು.