ಕುಣಿಗಲ್: ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ದೊಡ್ಡಕೊಪ್ಪಲು ಮನೆಗೆ ಶನಿವಾರ ಸಿಬಿಐ ಅಧಿಕಾರಿಗಳು ಭೇಟಿ ನೀಡಿ, ಕುಟುಂಬ ಸದಸ್ಯರ ವಿಚಾರಣೆ ನಡೆಸಿದರು.
ಸಿಬಿಐ ಎಸ್ಪಿ ಕೃಷ್ಣಮೂರ್ತಿ ನೇತೃತ್ವದ ತಂಡ ಕುಟುಂಬ ಸದಸ್ಯರಿಂದ ಮಾಹಿತಿ ಪಡೆಯುವ ವೇಳೆ ಎಲ್ಲರ ಮೊಬೈಲ್ ಸ್ವಿಚ್ ಮಾಡಿಸಿತ್ತು. ಕುಟುಂಬಕ್ಕೆ ಸೇರದವರನ್ನು ಮತ್ತು ಬೆಂಗಾವಲು ಪೊಲೀಸರನ್ನು ಹೊರಗೆ ಕಳಿಸಿತ್ತು.
ತಾಯಿ ಗೌರಮ್ಮ, ತಂದೆ ಕರಿಯಣ್ಣ, ಸೋದರ ರಮೇಶ್ ಅವರನ್ನು ಸುಮಾರು 2 ಗಂಟೆ ಕಾಲ ವಿಚಾರಣೆಗೆ ಒಳಪಡಿಸಿತು. ‘ರವಿ ಸ್ವಭಾವ ಹೇಗಿತ್ತು? ಅವರ ಗೆಳೆಯರು ಯಾರು? ಶತ್ರುಗಳು ಇದ್ದಾರೆಂದು ನಿಮ್ಮ ಬಳಿ ಹೇಳಿಕೊಂಡಿದ್ದರೆ? ಕೌಟುಂಬಿಕ ಸಾಮರಸ್ಯ ಹೇಗಿತ್ತು?’ ಎಂದು ಸಿಬಿಐ ತಂಡ ಪ್ರಶ್ನಿಸಿತು ಎಂದು ತಿಳಿದು ಬಂದಿದೆ.
‘ನನ್ನ ಮಗ ಬುದ್ಧಿವಂತ. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿ ಅವನದಲ್ಲ. ತನಿಖೆ ನಡೆಸಿ, ಸಮಾಜಕ್ಕೆ ಸತ್ಯ ತಿಳಿಸಬೇಕು’ ಎಂದು ಕುಟುಂಬದ ಸದಸ್ಯರು ಅಧಿಕಾರಿಗಳನ್ನು ಕೋರಿದರು.
‘ಡಿ.ಕೆ.ರವಿ ಶವವನ್ನು ಹೊರತೆಗೆದು ಪರೀಕ್ಷೆ ನಡೆಸುವ ಬಗ್ಗೆ ಸಿಬಿಐ ಅಧಿಕಾರಿಗಳು ಸ್ಪಷ್ಟವಾಗಿ ಏನೂ ಹೇಳಿಲ್ಲ. ಶವ ಪರೀಕ್ಷೆ ವರದಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆಂದು ರಮೇಶ್ ಹೇಳಿದರು.
-ಪ್ರಜಾವಾಣಿ