ಮಂಗಳೂರು,ಮೇ.22 : ಕ್ರಿಕೆಟ್ ಆಟದ ಬಳಿಕ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ನೀರಿಗಿಳಿದ ಸಹೋದರರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ 6.30 ನಡೆದಿದೆ. ಸುಜೀರ್ ಮಲ್ಲಿ ನಿವಾಸಿ ಪ್ರಸ್ತುತ ವಿದೇಶದಲ್ಲಿ ಉದ್ಯೋಗದಲ್ಲಿರುವ ಇಸಾಖ್ ಅವರ ಪುತ್ರರಾದ ಶಾಹಿಲ್( 15) ಮತ್ತು ಸುಹೈಲ್(12) ಮೃತಪಟ್ಟವರು. ಅವರಿಬ್ಬರೂ ಮೇರಮಜಲು ಹೋಲಿಫ್ಯಾಮಿಲಿ ಶಾಲೆಯ ವಿದ್ಯಾರ್ಥಿಗಳು. ಓರ್ವ ಮುಳುಗಿದ್ದನ್ನು ಕಂಡು ಮತ್ತೂಬ್ಬ ಆತನ ರಕ್ಷಣೆಗೆ ಧಾವಿಸಿದ್ದು, ಅದರಲ್ಲಿ ಯಶಸ್ವಿಯಾಗದೆ ಇಬ್ಬರೂ ನೀರು ಪಾಲಾದರು ಎಂದು ತಿಳಿದುಬಂದಿದೆ.
ಕ್ರಿಕೆಟ್ ಆಟದ ತಂಡದಲ್ಲಿದ್ದ ಇತರ ಆಟಗಾರರು ನದಿ ಬದಿಯಲ್ಲಿದ್ದು, ದುರಂತ ಸಂಭವಿಸುತ್ತಿದ್ದಂತೆ ರಕ್ಷಣೆಗಾಗಿ ಬೊಬ್ಬೆ ಹಾಕಿದರು. ಸ್ಥಳೀಯ ನಿವಾಸಿ, ಗ್ರಾ.ಪಂ. ಮಾಜಿ ಸದಸ್ಯ ಸುಜೀರ್ ಗುತ್ತು ನರೇಂದ್ರ ನಾಯಕ್ ಅವರು ಧಾವಿಸಿ ಹೋಗಿ ನೀರಲ್ಲಿದ್ದ ಇಬ್ಬರು ಸೋದರರನ್ನು ಮೇಲಕ್ಕೆತ್ತಿದರೂ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಮೃತದೇಹಗಳನ್ನು ತುಂಬೆ ಆಸ್ಪತ್ರೆಗೆ ತರಲಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಅಲ್ಲಿ ಜನ ಜಮಾಯಿಸಿದ್ದರು. ಬಳಿಕ ಮಂಗಳೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದಿದ್ದರು.
ಮರಳುಗಾರಿಕೆಯ ವಿರುದ್ದ ಆಕ್ರೋಶ: ಯಾಂತ್ರಿಕೃತ ಮರಳುಗಾರಿಕೆ ನಿಷೇಧವಿದ್ದರೂ ಇಲ್ಲಿ ಜೆಸಿಬಿ ಬಳಿಸಿ ಮರಳುಗಾರಿಕೆ ನಡೆಸುವುದರಿಂದ ನದಿಯಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣಗೊಂಡು ನೀರು ತುಂಬಿ ನಿಂತಿದೆ. ಇದರಿಂದಾಗಿ ಸ್ನಾನಕ್ಕೆ ಹೋದ ಸಹೋದರರಿಬ್ಬರು ಸಾವಿಗೀಡಲು ಕಾರಣ ಎನ್ನುವ ಆಕ್ರೋಶದ ಮಾತುಗಳು ಸ್ಥಳೀಯರಿಂದ ಕೇಳಿ ಬಂದಿದೆ.