ಜೈಪುರ: ಸುಮಾರು 50 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಬುದ್ಧಿಮಾಂದ್ಯೆ ಬಾಲಕಿಯನ್ನು, 30 ಗಂಟೆಗಳ ಸತತ ಕಾರ್ಯಾಚರಣೆ ನಂತರ ರಕ್ಷಿಸಲಾಗಿದೆ.
ರಾಜಸ್ಥಾನದ ಸಿಕಾರ್ ಪ್ರದೇಶದಲ್ಲಿ ಶನಿವಾರ ಬಯಲಿನಲ್ಲಿ ಆಟವಾಡುತ್ತಿದ್ದ ಸುನೀತಾ (7) ತೆರೆದ ಕೊಳವೆ ಬಾವಿಯೊಳಗೆ ಬಿದ್ದಿದ್ದಳು. ಭಾನುವಾರ ಅವಳನ್ರನು ರಕ್ಷಿಸಿದ್ದು, ಬಾಲಕಿಯನ್ನು ಆಸ್ಪತ್ರೆಗೆ ಸಾಗಸಲಾಗಿದೆ. ‘ಮೊದಲ ನೋಟದಲ್ಲಿ ಸುನೀತಾ ಆರೋಗ್ಯವಾಗಿದ್ದಾಳೆ ಎನಿಸುತ್ತಿದೆ,’ ಎಂದು ಜಿಲ್ಲಾಧಿಕಾರಿ ಲಕ್ಷ್ಮಿನಾರಾಯಣ್ ತಿಳಿಸಿದ್ದಾರೆ.
‘ಸೈನಿಕರು ಹಾಗೂ ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬುದ್ಧಿಮಾಂದ್ಯೆಯಾದ ಬಾಲಕಿಗೆ ಮಾತನಾಡಲೂ ಬರುವುದಿಲ್ಲ. ಆದ ಕಾರಣ ಆಕೆಯೊಂದಿಗೆ ಸಂಪರ್ಕ ಸಾಧಿಸಿ, ಜೀವ ರಕ್ಷಣಾ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಯಿತು,’ ಎಂದರು.
‘ಕಲ್ಲಿನಿಂದ ಕೂಡಿದ ಪ್ರದೇಶವಾದ್ದರಿಂದ ಭೂಮಿಯನ್ನು ಕೊರೆಯುವುದು ಕಷ್ಟವಾಗಿತ್ತು. ಆದರೆ, ಸುರಕ್ಷಿತವಾಗಿ ಬಾಲಕಿಯನ್ನು ರಕ್ಷಿಸಲಾಗಿದೆ,’ ಎಂದರು.
ಏತನ್ಮಧ್ಯೆ, ಪಾಟ್ನಾದ ಫುಲ್ವಾರಿಶರೀಫ್ ಪ್ರದೇಶದಲ್ಲಿ 15 ಅಡಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಐದು ವರ್ಷದ ಬಾಲಕಿ ರಕ್ಷಿಸಿದ ನಂತರ ಮೃತಪಟ್ಟಿದ್ದಾಳೆ.