ಕುಂದಾಪುರ: ಪ್ರತಿ ವರ್ಷ ಮಳೆಗಾಲ ಬಂತೆಂದರೇ ಇಲ್ಲಿನ ಜನರಿಗೆ ನಡುಕ ಆರಂಭವಾಗುತ್ತೆ. ತುಂಬಿ ಹರಿಯುವ ನದಿಯ ಮೇಲ್ಗಡೆ ಕಟ್ಟಿದ ಕಬ್ಬಿಣದ ಹಗ್ಗ(ರೋಪ್) ಮೇಲೆ ನಡೆದೇ ಹೋಗಬೇಕಾದ ಅನಿವಾರ್ಯತೆ ಇವರದ್ದು. ಕಳೆದ ಹತ್ತಾರು ವರ್ಷಗಳಿಂದ ಇದೇ ಹಗ್ಗದ ಮೇಲೆ ಪ್ರಾಣದ ಆಸೆ ಬಿಟ್ಟು ನಡೆದು ಸಾಗಿ ಹೊಳೆ ದಾಟಬೇಕು. ಹೀಗೆ ಸಂಪರ್ಕಕ್ಕೆ ರಿಸ್ಕ್ ತೆಗೆದುಕೊಳ್ಳುವ ಜನರ ಸಮಸ್ಯೆ ಕುರಿತ ಒಂದು ಸ್ಟೋರಿಯಿದು.
ಬೈಂದೂರು ಗ್ರಾಮಪಂಚಾಯತ್ ವ್ಯಾಪ್ತಿಯ ದೇವರಗದ್ದೆ ಎನ್ನುವ ಪುಟ್ಟ ಗ್ರಾಮದ ಜನರನ್ನು ಮಳೆಗಾಲದಲ್ಲಿ ಆ ದೇವರೇ ಕಾಪಾಡಬೇಕು. ಯಾಕೆ ಅಂತೀರಾ ದೇವರಗದ್ದೆ ಜನರು ತಮ್ಮ ಮನೆಯಿಂದ ಹೊರಪ್ರದೇಶಕ್ಕೆ ಹೊಗಬೇಕಾದರೇ ತೂದಳ್ಳಿ ಹೊಳೆ ದಾಟಲೇಬೇಕು. ಆದರೇ ಇಲ್ಲಿ ಸೇತುವೆ ಇಲ್ಲದ ಕಾರಣ ಕಳೆದ ಹತ್ತಾರು ವರ್ಷಗಳಿಂದ ಜನರು ಸೇತುವೆಯ ಬದಲಿಗೆ ಕಬ್ಬಿಣದ ನಾಲ್ಕು ರೋಪ್ ಕಟ್ಟಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಂದು ಹಗ್ಗದ ಮೇಲೆ ಕಾಲಿಟ್ಟು ನಡೆದರೇ ಇನ್ನೊಂದು ಹಗ್ಗವನ್ನು ನಡೆಯುವ ವೇಳೆ ಬಲಕ್ಕಾಗಿ ಹಿಡಿದುಕೊಂಡು ಸರ್ಕಸ್ ಮಾದರಿಯಲ್ಲಿ ನಾಜೂಕಾಗಿ ನಡೆದುಬರಬೇಕು. ಈ ಮಧ್ಯೆ ಕೊಂಚ ಯಾಮಾರಿದ್ರೂ ಅಪಾಯ ಗ್ಯಾರೆಂಟಿ. ಮಳೆಗಾಲ ಆರಂಭವಾಗುವ ಜೂನ್ನಿಂದ ಆರಂಭಿಸಿ ನೀರಿನ ಹರಿವು ಕಮ್ಮಿಯಾಗುವ ಜನವರಿ ತಿಂಗಳಿನವರೆಗೂ ಜನರು ನಿತ್ಯ ಯಾತನಾಮಯ ಜೀವನ ಸಾಗಿಸಬೇಕಿದೆ. ಐದಾರು ತಿಂಗಳು ಇಲ್ಲಿನ ಜನರು ಪಡುವ ಪಾಡು ಆ ದೇವರಿಗೆ ಪ್ರೀತಿ.
ಬೈಂದೂರು ಗ್ರಾ.ಪಂ. ವ್ಯಾಪ್ತಿಯ ಕೊಸಳ್ಳಿ ಜಲಪಾತದಿಂದ ಹರಿದು ಬರುವ ನೀರು ಹಾಗೂ ಬರ್ತಕಲ್ ಪಾಲ್ಸ್ನಿಂದ ಹರಿಯುವ ನೀರು ಒಗ್ಗೂಡಿ ಈ ತೂದಳ್ಳಿ ನದಿ ಹರಿಯುತ್ತದೆ. ಈ ನದಿಯ ಇನ್ನೊಂದು ಭಾಗದಲ್ಲಿರುವ ಪುಟ್ಟ ಊರೇ ದೇವರಗದ್ದೆ. ಸುಮಾರು ಹತ್ತು ಕುಟುಂಬಗಳು ವಾಸಿಸುವ ಈ ಪ್ರದೇಶವಾಗಿದ್ದು ಅನೇಕ ವಿದ್ಯಾರ್ಥಿಗಳು ಪ್ರತಿದಿನ ಬೈಂದೂರು ಭಾಗದ ವಿವಿಧ ಶಾಲೆಕಾಲೇಜಿಗೆ ತೆರಳುತ್ತಾರೆ. ಅವರು ಈ ಹಗ್ಗದ ಮೇಲೆ ನಡೆದೇ ಶಾಲೆ-ಕಾಲೇಜಿಗೆ ಹೋಗಬೇಕು. ಇನ್ನು ಕೆಲವು ವಿದ್ಯಾರ್ಥಿಗಳು ಈ ಸಮಸ್ಯೆಯಿಂದ ಹಾಸ್ಟೆಲ್ ವಸತಿಯನ್ನು ಅವಲಂಭಿಸಬೇಕಿದೆ. ಈ ಭಾಗದಲ್ಲಿ ಬಾಳೆ, ಅಡಿಕೆ, ತೆಂಗು, ರಬ್ಬರ್ ತೋಟಗಳಿದ್ದು ಕೃಷಿಕರು ಬೇಸಾಯಕ್ಕೆ ಅಗತ್ಯತೆಯಿರುವ ಸರಕುಗಳ್ನು ಸಾಗಿಸುವುದಕ್ಕೂ ಹರಸಾಹಸಪಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಹತ್ತು ವರ್ಷಗಳಿಂದ ಅತ್ಯಾಡಿ ಸೈಂಟ್ ಮೇರಿಸ್ ಚರ್ಚ್ನವರು ಈ ಕಾಲುಸಂಕದ ನಿರ್ವಹಣೆ ಜವಬ್ದಾರಿ ಹೊತ್ತಿದ್ದಾರೆ.
ಈ ದೇವರುಗದ್ದೆಯಲ್ಲಿ ವೃದ್ಧರಿದ್ದಾರೆ, ಅಂಗವಿಕಲತೆ ಇರುವ ವ್ಯಕ್ತಿಯೋರ್ವರಿದ್ದಾರೆ. ಅನಾರೋಗ್ಯ ಅಥವಾ ಇನ್ನಾವುದೆ ಅವಘಡ ಸಂಭವಿಸಿದಾಗ ಆಸ್ಪತ್ರೆ ಸಾಗಿಸುವುದು ತುಂಬಾನೇ ಕಷ್ಟ. ಈ ಬಗ್ಗೆ ಇಲ್ಲಿನ ಸ್ಥಳೀಯರು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿಯವರಿಗೂ ಕಿರು ಸೇತುವೆಯ ನಿರ್ಮಾಣದ ಕುರಿತು ಮನವಿಯನ್ನು ಸಲ್ಲಿಸಿದ್ದಾರೆ. ಅಂತೆಯೇ ಕಳೆದ ವರ್ಷ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಶೀಘ್ರ ಕಿರು ಸೇತುವೆ ನಿರ್ಮಾಣದ ಕುರಿತು ಸಂಬಂದಪಟ್ಟವರೊಂದಿಗೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ.
ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ದೇವರುಗದ್ದೆ ಸಂಪರ್ಕಕ್ಕೆ ಕಿರುಸೇತುವೆ ನಿರ್ಮಿಸಬೇಕು, ಇಲ್ಲಿನ ಜನರ ಹಲವು ವರ್ಷಗಳ ಸಮಸ್ಯೆಗೆ ಪರಿಹಾರವನ್ನು ಶೀಘ್ರವೇ ಒದಗಿಸಬೇಕಿದೆ.
ಚಿತ್ರ, ವರದಿ- ಯೋಗೀಶ್ ಕುಂಭಾಸಿ