ಉಡುಪಿ: ವಿಷ ಪದಾರ್ಥವನ್ನು ಸೇವಿಸಿ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿಯ ಸರ್ವಿಸ್ ಬಸ್ಸು ನಿಲ್ದಾಣ ಸಮೀಪದ ಲಾಡ್ಜಿನಲ್ಲಿ ನಡೆದಿದೆ.
ಉಡುಪಿ ಚಿಟ್ಪಾಡಿ ನಿವಾಸಿ ಸತ್ಯಜಿತ್(27) ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ.
ಘಟನೆ ವಿವರ: ಉಡುಪಿಯ ಕ್ಷೌರದಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸತ್ಯಜಿತ್ ಜುಲೈ೩೧ರ ರಾತ್ರಿ ಗೆಳೆಯನೊಂದಿಗೆ ಟೂರಿಸ್ಟ್ ಲಾಡ್ಜಿಗೆ ಬಂದು ಕುಡಿಯಲು ಆರಂಭಿಸಿದ್ದಾರೆ. ರಾತ್ರಿಯ ನಂತರ ಆತನ ಗೆಳೆಯ ಕೊಠಡಿಯಿಂದ ತೆರಳಿದ್ದು ಬಳಿಕ ಪುನಃ ಮದ್ಯವನ್ನು ತರಿಸಿಕೊಂಡ ಸತ್ಯಜಿತ್ ಅದರಲ್ಲಿ ವಿಷವನ್ನು ಬೆರೆಸಿ ಕುಡಿದಿದ್ದಾನೆ ಎನ್ನಲಾಗಿದೆ. ಬೆಳಿಗ್ಗೆ ಲಾಡ್ಜಿನವರು ಕೊಠಡಿ ಸಮೀಪ ಬಂದು ಬಾಗಿಲು ತಟ್ಟಿದ್ದು ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಸ್ಥಳಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ಒಳನೋಡಿದಾಗ ಸತ್ಯಜಿತ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸತ್ಯಜಿತ್ ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬುದತ್ರ ಬಗ್ಗೆ ಖಚಿತ ಕಾರಣ ತಿಳಿದುಬಂದಿಲ್ಲ.
ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.