ಅಂತರಾಷ್ಟ್ರೀಯ

ಮುಂಬಯಿ ದಾಳಿಯ ಹಿಂದೆ ಪಾಕ್ ಕೈವಾಡ; ಪಾಕ್‌ ನ ಮಾಜಿ ತನಿಖಾಧಿಕಾರಿಯ ಹೇಳಿಕೆಯಿಂದ ಪುಷ್ಟಿ

Pinterest LinkedIn Tumblr

thariq

ಇಸ್ಲಾಮಾಬಾದ್‌: ಮುಂಬಯಿ ದಾಳಿ ಸಂಚು ಪಾಕ್‌ ನೆಲದಲ್ಲಿ ನಡೆದಿದೆ ಎಂಬ ಭಾರತದ ವಾದವನ್ನು ಪಾಕ್‌ ಸರಕಾರ ನಿರಕಾರಿಸಿದ್ದರೂ, ಆ ದೇಶದ ಮಾಜಿ ತನಿಖಾಧಿಕಾರಿ ತರೀಕ್‌ ಖೋಸಾ ಹೇಳಿಕೆ ನಮ್ಮ ವಾದವನ್ನು ಪುಷ್ಟೀಕರಿಸಿದೆ.

‘ಮುಂಬಯಿ ದಾಳಿಗೆ ಪಾಕ್‌ ನೆಲದಿಂದಲೇ ಸಂಚು ರೂಪಿಸಲಾಗಿತ್ತು. 2008ರಲ್ಲಿ ದೇಶದ ಉಗ್ರರನ್ನು ಮುಂಬಯಿಗೆ ರವಾನಿಸಿದ್ದ ತಪ್ಪನ್ನು ಪಾಕಿಸ್ತಾನ ಒಪ್ಪಿಕೊಳ್ಳಬೇಕು,’ ಎಂಬ ಪಾಕಿಸ್ತಾನದ ನಿವೃತ್ತ ಅಧಿಕಾರಿ ತರೀಕ್‌ ಹೇಳಿಕೆ ಮಂಗಳವಾರ ಬಹಿರಂಗಗೊಂಡಿದೆ. ಡಾನ್‌ ಪತ್ರಿಕೆ ವರದಿ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.

‘ಸತ್ಯವನ್ನು ಎದುರಿಸುವ ಧೈರ್ಯದ ಜತೆಗೆ ತಪ್ಪನ್ನು ಒಪ್ಪಿಕೊಳ್ಳುವ ಅಗತ್ಯ ಇದೆ. ಮುಂಬಯಿ ದಾಳಿಯ ಪಾತಕಿಗಳು, ಸಂಚು ರೂಪಕರಿಗೆ ಕಾನೂನನಲ್ಲಿ ತಕ್ಕ ಶಾಸ್ತಿ ಆಗಬೇಕು’ ಎಂದು ಹೇಳಿದ್ದಾರೆ.

‘ಪ್ರಕರಣದ ತನಿಖೆ ವಿಳಂಬಗೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಖೋಸಾ, ‘ಪ್ರತಿವಾದಿಗಳ ವಿಳಂಬ ತಂತ್ರ, ವಿಚಾರಣಾ ನ್ಯಾಯಾಧೀಶರ ಬದಲಾವಣೆ, ಪ್ರಾಸಿಕ್ಯೂಟರ್‌ಗಳ ಹತ್ಯೆ ಹಾಗೂ ಕೆಲ ಪ್ರಮುಖ ಸಾಕ್ಷಿಗಳ ಹೇಳಿಕೆ ತಿರುಚಿರುವುದರಿಂದ ಪ್ರಕರಣದ ವಿಚಾರಣೆ ನೆನೆಗುದಿಗೆ ಬಿದ್ದಿದೆ,’ ಎಂದಿದ್ದಾರೆ.

2008 ನವೆಂಬರ್‌ನಲ್ಲಿ ಪಾಕಿಸ್ತಾನದ 10 ಉಗ್ರರು ಸಮುದ್ರದ ಮೂಲಕ ಮುಂಬಯಿ ತಲುಪಿದ್ದರು. ದಾಳಿಯಲ್ಲಿ 166 ಮಂದಿ ಬಲಿಯಾಗಿದ್ದರು.

ಸಾಕ್ಷಿಗಳ ಪಟ್ಟಿ ಮಾಡಿದ ತರೀಕ್‌:

*ಮುಂಬಯಿ ದಾಳಿ ಪ್ರಕರಣದಲ್ಲಿ ಗಲ್ಲಿಗೇರಿದ ಕಸಬ್‌ ಪಾಕಿಸ್ತಾನಿ.

* ಮುಂಬಯಿ ದಾಳಿ ನಡೆಸಿದ ಲಷ್ಕರೆ ತಯ್ಬಾದ ಉಗ್ರರು ಸಿಂಧ್‌ ಪ್ರಾಂತ್ಯದ ತಟ್ಟ ಬಳಿ ತರಬೇತಿ ಪಡೆದಿದ್ದರು. ತರಬೇತಿ ಶಿಬಿರವನ್ನು ಗುರುತಿಸಲಾಗಿದೆ. ಮುಂಬಯಿ ದಾಳಿಗೆ ಬಳಿಸಿದ ಸ್ಫೋಟಕಗಳು ತರಬೇತಿ ಶಿಬಿರಗಳಲ್ಲಿ ಪತ್ತೆಯಾದ ಸ್ಫೋಟಗಳು ಒಂದೇ ಮಾದರಿಯದ್ದು ಎಂದು ಸಾಬೀತಾಗಿದೆ.

*ಭಾರತದ ದೋಣಿಯನ್ನು ಅಪಹರಿಸಲು ಉಗ್ರರು ಬಳಸಿದ್ದ ಮೀನುಗಾರಿಕೆ ದೋಣಿಯನ್ನು ಮತ್ತೆ ಬಂದರಿಗೆ ವಾಪಸ್‌ ತಂದು ಅದರ ಬಣ್ಣ ಬದಲಿಸಿ, ಅಡಗಿಸಿಡಲಾಗಿತ್ತು. ಅದನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

*ಮುಂಬಯಿ ದಾಳಿ ಕಾರ್ಯಾಚರಣೆಯನ್ನು ಕರಾಚಿಯ ಕೊಠಡಿಯಿಂದ ನಿರ್ದೇಶಿಸಲಾಗಿತ್ತು. ಆ ಕೊಠಡಿಯನ್ನು ಗುರುತಿಸಲಾಗಿದ್ದು, ಇಂಟರ್ನೆಟ್‌ ಪ್ರೊಟೊಕಾಲ್‌ ವಾಯ್ಸ್‌ ಓವರ್ ಮೂಲಕ ನಿರ್ದೇಶನ ನೀಡಲಾಗಿತ್ತು ಎಂಬ ವಿಷಯವನ್ನು ತನಿಖಾಧಿಕಾರಿಗಳು ಬಯಲು ಮಾಡಿದ್ದಾರೆ.

*ಕಮಾಂಡರ್‌ ಹಾಗೂ ಅವರ ಸಹಾಯಕರನ್ನು ಗುರುತಿಸಿ ಬಂಧಿಸಲಾಗಿದೆ, ಉಗ್ರರಿಗೆ ಹಣಕಾಸು ನೆರವು ನೀಡಿದ್ದ ಕೆಲ ವಿದೇಶಿಯರನ್ನು ಬಂಧಿಸಿ , ವಿಚಾರಣೆಗೆ ಗುರಿಪಡಿಸಲಾಗಿದೆ.

‘ಮುಂಬಯಿ ದಾಳಿ ಪ್ರಕರಣ ವಿಭಿನ್ನವಾಗಿದ್ದು, ನಾನಾ ಪ್ರದೇಶದ ವ್ಯಾಪ್ತಿಗೆ ಬರುವ ಕಾರಣ ಸಂಚನ್ನು ರೂಪಿಸುವುದು ಕಷ್ಟ. ಅದಕ್ಕಾಗಿ ಗುಣಮಟ್ಟದ ಸಾಕ್ಷ್ಯ ಅಗತ್ಯ. ಹಾಗಾಗಿ ಉಭಯ ದೇಶಗಳ ಕಾನೂನು ತಜ್ಞರು ಒಟ್ಟಿಗೆ ಕುಳಿತು ನಿರ್ಣಯ ಕೈಗೊಳ್ಳಬೇಕು,’ ಎಂದು ಅವರು ಅಭಿಪ್ರಾಯಟಪಟ್ಟಿದ್ದಾರೆ.

Write A Comment