ರಾಷ್ಟ್ರೀಯ

ಒಂದೇ ಒಂದು ಭ್ರಷ್ಟಾಚಾರ ಆರೋಪವೂ ಇಲ್ಲದ ಸರಕಾರ ನಮ್ಮದು: ಕೆಂಪುಕೋಟೆಯಿಂದ ಪ್ರಧಾನಿ

Pinterest LinkedIn Tumblr

moooಹೊಸದಿಲ್ಲಿ: ಕಳೆದೊಂದು ವರ್ಷದಲ್ಲಿ ತಮ್ಮ ಸರಕಾರ ಮಾಡಿದ ಸಾಧನೆಗಳನ್ನು ಬಿಚ್ಚಿಟ್ಟ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರ ನಿರ್ಮೂಲನೆ, ಕೃಷಿಕರ ಏಳಿಗೆ, ಕಾಳಧನ ತಡೆ, ನಿವೃತ್ತ ಯೋಧರಿಗೆ ಒಂದು ಶ್ರೇಣಿ, ಒಂದು ಪಿಂಚಣಿ ವ್ಯವಸ್ಥೆಗೆ ಬದ್ಧವಾಗಿದ್ದೇನೆ ಎಂದು ದೇಶದ ಜನತೆಗೆ ಭರವಸೆ ನೀಡಿದರು.

ಶನಿವಾರ ಬೆಳಗ್ಗೆ ಕೆಂಪುಕೋಟೆಯಿಂದ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಮೋದಿ, ಭಾರತವನ್ನು ಭ್ರಷ್ಟಾಚಾರಮುಕ್ತಗೊಳಿಸಬಹುದೆಂಬ ಭರವಸೆ ನನ್ನಲ್ಲಿದೆ ಎಂದರಲ್ಲದೆ, ಹದಿನೈದು ತಿಂಗಳಲ್ಲಿ ತಮ್ಮ ಸರಕಾರದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರ ಆರೋಪ ಬಂದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡರು.

‘ಕೆಲವರು ‘ನಿರಾಶೆ’ಯಲ್ಲೇ ಕಾಲ ಕಳೆಯಲು ಇಚ್ಛಿಸುತ್ತಾರೆ ಮತ್ತು ಅವರಿಗೆ ಈ ನಿರಾಶೆಯ ಬೀಜವನ್ನು ಬೇರೆಯವರಲ್ಲಿ ಬಿತ್ತುವವರೆಗೆ ನಿದ್ದೆ ಬರುವುದಿಲ್ಲ’ ಎಂದೂ ವಿರೋಧಿಗಳನ್ನು ಕುಟುಕಿದ ಮೋದಿ, ನೂರಿಪ್ಪತ್ತೈದು ಕೋಟಿ ಜನರಿರುವ ಟೀಂ ಇಂಡಿಯಾ, ಸರ್ವರ ಭಾಗೀದಾರಿಯೊಂದಿಗೆ ವಿಕಾಸದ ಹಾದಿಯಲ್ಲಿ ಮುನ್ನಡೆಯಲು ಸಮರ್ಥವಾಗಿದೆ ಎಂದು ನುಡಿದರು.

ಪ್ರಧಾನಿ ನರೇಂದ್ರ ಮೋದಿ ಮಾಡಿದ ಸ್ವಾತಂತ್ರ್ಯೋತ್ಸವ ಭಾಷಣದ ಮುಖ್ಯಾಂಶಗಳು:
* ಕಾಳ ಧನದ ವಿರುದ್ಧ ಕಠಿಣ ಕಾನೂನು ತಂದಿದ್ದೇವೆ; ದೇಶದಿಂದ ಹೊರಗೆ ಕಾಳಧನ ರವಾನಿಸುವ ಧೈರ್ಯ ಯಾರಿಗೂ ಇಲ್ಲದಂತಾಗಿದೆ
* ಕಾಳಧನ ಹಾಗೂ ವಿದೇಶೀ ಆಸ್ತಿಪಾಸ್ತಿ ಸಂಬಂಧಿತ ಕಾನೂನಿನ ಪ್ರಕಾರ 6500 ಕೋಟಿ ರೂ. ಇದೀಗ ಬಹಿರಂಗಗೊಂಡಿದೆ.
* 1,25 ಕೋಟಿ ಮಂದಿಯನ್ನೊಳಗೊಂಡ ಟೀಂ ಇಂಡಿಯಾ ಪಾರದರ್ಶಕತೆಯ ನಿರೀಕ್ಷೆಯಲ್ಲಿದೆ
* ಕೃಷಿ ಸಚಿವಾಲಯದೊಂದಿಗೆ ಕೃಷಿಕರ ಕಲ್ಯಾಣಕ್ಕೆ ವಿಶೇಷ ಒತ್ತು ನೀಡುತ್ತೇವೆ.
* ಭ್ರಷ್ಟಾಚಾರ ತಡೆಗೆ ಪ್ರಬಲ ಸಂಕಲ್ಪ. ಅಡುಗೆ ಅನಿಲ ಸಬ್ಸಿಡಿಯನ್ನು ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾಯಿಸುವ ಮೂಲಕ ಆ ಕ್ಷೇತ್ರದಲ್ಲಾಗುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ
* ಬ್ಯಾಂಕುಗಳ ಬಾಗಿಲು ಬಡವರಿಗೂ ತೆರೆದಂತಾಗಿದೆ. ಪ್ರತಿಯೊಬ್ಬ ಕುಟುಂಬವೂ ಬ್ಯಾಂಕ್ ಖಾತೆ ತೆರೆದಿದೆ.
* ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಒದಗಿಸುವ ಸ್ವಚ್ಛ ವಿದ್ಯಾಲಯ ಯೋಜನೆಯಲ್ಲಿ ಗುರಿ ಸಾಧಿಸಿದ್ದೇವೆ.
* ಬ್ಯಾಂಕುಗಳಿರುವುದೇ ಬಡವರಿಗಾಗಿ.
* ಇದೀಗ ದೇಶದಲ್ಲಿ ವಿಶ್ವಾಸದ, ಭರವಸೆಯ ವಾತಾವರಣವಿದೆ
* ಹಿಂದೆಲ್ಲಾ ಯೋಜನೆ ರೂಪಿಸುತ್ತಿದ್ದರು ಅದನ್ನು ಮರೆತುಬಿಡುತ್ತಿದ್ದರು, ಆದರೆ ನಾವು ಅದನ್ನು ಮಾಡಿ ತೋರಿಸಿದ್ದೇವೆ.

Write A Comment