ಕುಂದಾಪುರ: ಬಸ್ಸು ನಿಲ್ದಾಣದಲ್ಲಿ ಪತಿಯೊಂದಿಗೆ ಬಸ್ಸು ಕಾಯುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರ ಪೈಕಿ ಹಿಂಬದಿ ಸವಾರ ಮಹಿಳೆಯ ಮಂಗಳಸೂತ್ರ (ಕರಿಮಣಿ)ವನ್ನು ಸೆಳೆದು ಪರಾರಿಯಾದ ಘಟನೆ ಕುಂದಾಪುರ ತಾಲೂಕಿನ ತಲ್ಲೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಬಸ್ಸು ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಕುಂದಾಪುರದ ನೇರಳಕಟ್ಟೆ ಕರ್ಕುಂಜೆ ನಿವಾಸಿ ಸೀತಾ ಎನ್ನುವವರ ಕರಿಮಣಿ ಸರ ಕಳವಾಗಿದ್ದು 8 ಫವನ್ ತೂಕದದ್ದಾಗಿದೆ. ಅಂದಾಜು 2.5 ಲಕ್ಷ ಮೌಲ್ಯದ್ದೆಂದು ಅಂದಾಜಿಸಲಾಗಿದೆ.
ಘಟನೆ ವಿವರ: ಕರ್ಕುಂಜೆಯ ಸೀತಾ ಎನ್ನುವವರು ಪತಿ ತೇಜ ಅವರೊಂದಿಗೆ ತನ್ನ ಕಾಲು ನೋವಿಗೆ ಚಿಕಿತ್ಸೆ ಪಡೆಯಲು ತಲ್ಲೂರಿನ ವೈದ್ಯರ ಬಳಿ ಬಂದಿದ್ದು ವೈದ್ಯರ ಸಲಹೆಯಂತೆ ಕುಂದಾಪುರಕ್ಕೆ ಎಕ್ಸ್-ರೇ ಮಾಡಲು ತೆರಳಲು ಬಸ್ಸು ಕಾಯುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರ ಪೈಕಿ ಹಿಂಬದಿ ಸವಾರ ಸೀತಾ ಅವರ ಕುತ್ತಿಗೆಯಲ್ಲಿದ್ದ ಮಂಗಳಸೂತ್ರವನ್ನು ಸೆಳೆದಿದ್ದಾನೆ. ಕೂಡಲೇ ಬೈಕ್ ರಭಸವಾಗಿ ಕುಂದಾಪುರದತ್ತ ಸಾಗಿದೆ. ಸ್ಥಳೀಯರು ಕೂಡಲೇ ಕುಂದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು ಕುಂದಾಪುರ ಪೊಲೀಸರು ಶಾಸ್ತ್ರೀ ವ್ರತ್ತದಲ್ಲಿ ಬೈಕನ್ನು ಅಡ್ಡಗಟ್ಟುವ ಪ್ರಯತ್ನ ನಡೆಸಿದರಾದರೂ ಬೈಕ್ ಅತೀ ವೇಗದಲ್ಲಿ ತೆರಳಿದೆ, ಪೊಲೀಸರು ಬಹು ದೂರ ಬೆನ್ನಟ್ಟಿದರೂ ಕೂಡ ಚಳ್ಳೆಹಣ್ಣು ತಿನ್ನಿಸಿ ಆಗಂತುಕರು ಪರಾರಿಯಾಗಿದ್ದಾರೆ.
ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಕಪ್ಪು ಬಣ್ಣದ ಫಲ್ಸರ್ ಬೈಕ್ ಇದಾಗಿದ್ದು ಬೈಕ್ ಸವಾರ ಹೆಲ್ಮೇಟ್ ಧರಿಸಿ, ಹಿಂಬದಿ ಸವಾರ ನೀಲಿ ಬಣ್ಣದ ಟೀಶರ್ಟ್ ಧರಿಸಿದ್ದ ಎನ್ನಲಾಗಿದೆ. ಮೂಲವೊಂದರ ಪ್ರಕಾರ ಆರೋಪಿಗಳು ಕ್ರತ್ಯಕ್ಕೆ ಬಳಸುವ ಬೈಕಿನ ಹಿಂಭಾಗದಲ್ಲಿ ಇವರಿಗೆ ಸಂಬಂದಿಸಿದೆ ಎನ್ನಲಾದ ನಾಲ್ವರು ಇರುವ ಕಾರೊಂದು ಚಲಿಸುತ್ತಾ ಬಂದಿದೆ ಎನ್ನಲಾಗಿದ್ದು ಇವರದ್ದು ದೊಡ್ಡ ಜಾಲವೇ ಇರಬಹುದೆಂದು ಅಂದಾಜಿಸಲಾಗಿದೆ. ಬೆಳಿಗ್ಗೆ ಕಾರಾವರ ಹಾಗೂ ಭಟ್ಕಳದಲ್ಲಿಯೂ ಬೆಳಿಗ್ಗೆ ಹಾಗೂ 10 ಗಂಟೆ ಸುಮಾರಿಗೆ ಇದೇ ಮಾದರಿಯ ಕಳ್ಳತನ ನಡೆದಿದೆಯೆಂದು ಮೂಲಗಳು ತಿಳಿಸಿದೆ.
ಕುಂದಾಪುರ ಪೊಲೀಸರು ಮಹಿಳೆಯಿಂದ ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದು ಕರಿಮಣಿ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.