ಮಂಗಳೂರು, ಆ.20: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಶ್ರೀಮಂತರ, ಉದ್ಯಮಿಗಳ, ಬಂಡವಾಳ ಶಾಹಿಗಳ ಕೈಗೊಂಬೆಯಾಗಿದೆ ಎಂದು ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಆರೋಪಿಸಿದ್ದಾರೆ.
ಬುಧವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕ್ರಿಯಾತ್ಮಕ ಯೋಜನೆಗಳು ನೂತನ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಜಾರಿಯಾಗಿಲ್ಲ. ಬ್ಯಾಂಕ್ಗಳ ಮೂಲಕ ಜನಧನ್ ಯೋಜನೆ ಆರಂಭಿಸಿದ್ದೇವೆ ಎನ್ನುವ ಮೋದಿ ಬ್ಯಾಂಕ್ಗಳಲ್ಲಿ ಕೋಟ್ಯಂತರ ರೂ. ಎನ್ಪಿಎ ಹೆಚ್ಚಳವಾಗಿರುವ ಬಗ್ಗೆ ಮಾತನಾಡುವುದಿಲ್ಲ.
ದೇಶದ ಸಿಮೆಂಟ್, ಆಯಿಲ್ ಮತ್ತು ನೈಸರ್ಗಿಕ ಅನಿಲಕ್ಷೇತ್ರದ ಆರ್ಥಿಕ ಬೆಳವಣಿಗೆಯೂ ಕುಂಠಿತಗೊಂಡಿದೆ. ದೇಶದಲ್ಲಿ ಧರ್ಮದ ಆಧಾರದಲ್ಲಿ ಜನರು ಧ್ರುವೀಕರಣಗೊಳ್ಳಲು ಬಿಜೆಪಿ ಕಾರಣ ವಾಗಿದೆ ಎಂದು ಮನೀಶ್ ತಿವಾರಿ ಟೀಕಿಸಿದರು.
ಪುಣೆಯ ಎಫ್ಟಿಐಐ ಯಲ್ಲಿನ ನೇಮಕಾತಿಯ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದರು.
ಬಿಜೆಪಿ ಮಿಸ್ಕಾಲ್ಗಳನ್ನು ನೀಡುವವರನ್ನು ಪಕ್ಕಕ್ಕೆ ಸೇರ್ಪಡೆಗೊಳಿಸಿ ಕೋಟ್ಯಂತರ ಸದಸ್ಯರಾಗಿದ್ದಾರೆ ಎಂದು ಲೆಕ್ಕ ತೋರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಸದಸ್ಯರನ್ನು ಆಯ್ಕೆಮಾಡಲು ಒಂದು ಮಾನದಂಡವನ್ನು ಬಳಸುತ್ತಿದೆ ಎಂದು ತಿವಾರಿ ಬಜೆಪಿ ಮಿಸ್ಕಾಲ್ ಸದಸ್ಯತ್ವ ಅಭಿಯಾನವನ್ನು ಟೀಕಿಸಿದರು.
ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಕೆಪಿಸಿಸಿ ಸದಸ್ಯ ಮುಹಮ್ಮದ್ ಬದ್ರುದ್ದೀನ್, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಾದ ನಾಗೇಂದ್ರ, ಟಿ.ಕೆ.ಸುಧೀರ್, ವಿಶ್ವಾಸ್ ದಾಸ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.