ದಮಾಮ್, ಸೆಪ್ಟೆಂಬರ್- 14: ಬ್ರಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಆಯ್ಕೆಯ ಚುನಾವಣೆಯಲ್ಲಿ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬೆಂಬಲ ನೀಡಿ ನಿರ್ಣಾಯ ಪಾತ್ರ ವಹಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮುಜಾಹಿದ್ ಪಾಶಾರಿಗೆ ಸೌದಿಅರೇಬಿಯ ಈಸ್ಟರ್ನ್ ಪ್ರೊವಿನ್ಸ್ ಇಂಡಿಯನ್ ಸೋಶಿಯಲ್ ಫೋರಂ (ಐಎಸ್ಎಫ್) ಕೇಂದ್ರ ಸಮಿತಿಯು ಅಭಿನಂದನೆ ಸಲ್ಲಿಸಿದೆ. ಸಿದ್ಧಾಪುರ ವಾರ್ಡು ಎಸ್ ಡಿಪಿಐ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಬಿಎಸ್ಸಿ ಪದವೀಧರರಾಗಿರುವ ಮುಜಾಹಿದ್ ಪಾಶಾರನ್ನು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ದಮಾಮ್ ನಲ್ಲಿ ಸಿಹಿತಿಂಡಿ ವಿತರಿಸಿ ಸಂಭ್ರಮ, ಅಭಿನಂದನಾ ಸಭೆ ನಡೆಸಲಾಯಿತು.
ಅಭಿನಂದನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯಾಧ್ಯಕ್ಷ ಶರೀಫ್ ಅಡ್ಡೂರು ಮಾತನಾಡಿ, ಭಾರತ ದೇಶದ ರಾಜಕಾರಣದಲ್ಲಿ ಆಶಾಕಿರಣವಾಗಿ ಮೂಡಿಬಂದಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇಂದು ಹೊಸ ಮೈಲುಗಲ್ಲು ಸ್ಥಾಪಿಸಿದೆ. ಇತ್ತೀಚೆಗೆ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಎಸ್ ಡಿಪಿಐ ಪಕ್ಷವು ತಾನು ಸ್ಪರ್ಧಿಸಿದ್ದ ವಾರ್ಡುಗಳಲ್ಲಿ ಅತಿಹೆಚ್ಚು ಮತಗಳನ್ನು ಪಡೆದ ಪೈಕಿ ಮೂರನೆ ಪಕ್ಷವಾಗಿದೆ. ಎಸ್ ಡಿಪಿಐ ರಾಷ್ಟ್ರೀಯ ಪಕ್ಷವಾಗಿದ್ದು, ಇದೀಗ ಪ್ರಭಾವೀ ರಾಷ್ಟ್ರೀಯ ಪಕ್ಷಗಳಿಗೆ ಸವಾಲೊಡ್ಡುವ ಮಟ್ಟಕ್ಕೆ ತಲುಪಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇದಕ್ಕೆ ಕಾರ್ಯಕರ್ತರ ನಿಸ್ವಾರ್ಥ, ಕಠಿಣ ಪರಿಶ್ರಮವೇ ಕಾರಣ ಎಂದರು. ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 71 ಕಡೆ ಗೆಲುವು ಸಾಧಿಸಿರುವ ಎಸ್ ಡಿಪಿಐ ಮೊನ್ನೆ ನಡೆದ ಬಿಬಿಎಂಪಿ ಚುನಾವಣೆಯಲ್ಲೂ ಕೆಲವು ಕಡೆ ಕೂದಲೆಳೆಯ ಅಂತರದಲ್ಲಿ ಸೋಲನುಭವಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸೀಟುಗಳನ್ನು ಗೆಲ್ಲಲಿದೆ ಎಂದು ಶರೀಫ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸಕ್ತ ರಾಜಕೀಯ ಮತ್ತು ಎಸ್ ಡಿಪಿಐ ಪಕ್ಷದ ಪಾತ್ರದ ಬಗ್ಗೆ ತೌಫೀಕ್ ಅಹ್ಮದ್ ಸಾಕ್ಷೃಚಿತ್ರ ಸಹಿತ ವಿವರಿಸಿದರು.
ಅಭಿನಂದನಾ ಸಮಾರಂಭದಲ್ಲಿ ರಾಜ್ಯ ಕಾರ್ಯದರ್ಶಿ ಶಾಫಿ ಇಮ್ರಾನ್ ಸೇರಿದಂತೆ, ಇಂಡಿಯನ್ ಸೋಶಿಯಲ್ ಫೋರಂ ಕೇಂದ್ರ ಸಮಿತಿ, ಕರ್ನಾಟಕ ರಾಜ್ಯ ಸಮಿತಿ, ಉಡುಪಿ ಜಿಲ್ಲಾ ಸಮಿತಿ-ಜುಬೈಲ್, ದ.ಕ.ಜಿಲ್ಲಾ ಸಮಿತಿ ದಮಾಮ್-ಖೋಬರ್, ದ.ಕ.ಜಿಲ್ಲಾ ಸಮಿತಿ-ಜುಬೈಲ್ ಹಾಗೂ ಅಲ್ –ಹಸ ಜಿಲ್ಲಾ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಲೀಂ ಜಿ.ಕೆ. ಅವರು ಧನ್ಯವಾದ ಸಲ್ಲಿಸಿದರು. ಇಂಡಿಯನ್ ಸೋಶಿಯಲ್ ಫೋರಂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪರಸ್ಪರ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು. ಅಭಿನಂದನಾ ಸಮಾರಂಭದ ಪ್ರಯುಕ್ತ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.