ಹೈದರಾಬಾದ್: 50 ವರ್ಷದ ಮದ್ಯವ್ಯಸನಿ ಮಹಿಳೆಯೊಬ್ಬಳು ಮದ್ಯಪಾನಕ್ಕೆ ಹಣ ನೀಡಲಿಲ್ಲವೆಂಬ ಕಾರಣಕ್ಕೆ ತನ್ನ ಗಂಡನನ್ನು ಕತ್ತು ಹಿಸುಕಿ ಸಾಯಿಸಿದ್ದಾಳೆ.
ಹೈದರಾಬಾದ್ ನ ಒಸಾಮಿಯಾ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಮಣಿಕೇಶ್ವರ್ ನಗರದಲ್ಲಿ ಈ ಘಟನೆ ನಡೆದಿದೆ. ಹತ್ಯೆ ಮಾಡಿರುವ ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. ಹತ ವ್ಯಕ್ತಿಯನ್ನು ಚಂದ್ರಯ್ಯ(53) ಎಂದು ಗುರುತಿಸಲಾಗಿದೆ.
ದಸರಾ ಹಬ್ಬದ ಅಂಗವಾಗಿ ಮದ್ಯ ಖರೀದಿಸಲು ಹಣ ನೀಡುವಂತೆ ಚಂದ್ರಯ್ಯ ಬಳಿ ಆತನ ಪತ್ನಿ ರಾಮುಲಮ್ಮ ಕೇಳಿದ್ದಾಳೆ. ಆದರೆ ಹಣ ನೀಡಲು ಚಂದ್ರಯ್ಯ ನಿರಾಕರಿಸಿದ್ದು ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ಮದ್ಯ ಖರೀದಿಗೆ ಹಣ ನೀಡಲಿಲ್ಲವೆಂಬ ಕೋಪಕ್ಕೆ ರಾಮುಲಮ್ಮ ಹಲ್ಲೆ ನಡೆಸಿದ್ದರಿಂದ ಚಂದ್ರಯ್ಯ ಪ್ರಜ್ಞಾಹೀನನಾಗಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆತನ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ ಎಂದು ಒಸಾಮಿಯಾ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಇನ್ಸ್ ಪೆಕ್ಟರ್ ವಿ.ಅಶೋಕ್ ರೆಡ್ಡಿ ತಿಳಿಸಿದ್ದಾರೆ.
ಗಂಡನನ್ನು ಹತ್ಯೆ ಮಾಡಿದ ಬಳಿಕ ಆತನಿಗೆ ಹೃದಾಯಾಘಾತವಾಗಿ ಸಾವನ್ನಪ್ಪಿದ್ದಾನೆ ಎಂಬ ನೆಪ ಹೇಳಿ ರಾಮುಲಮ್ಮ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆದರೆ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇಂಥದ್ದೇ ಮತ್ತೊಂದು ಘಟನೆ ನವೋದಯ ನಗರದಲ್ಲಿ ನಡೆದಿದ್ದು ಮದ್ಯ ಖರೀದಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮಗನೇ ತಂದೆಯನ್ನು ಕೊಂದಿದ್ದಾನೆ.