ಮಂಗಳೂರು, ನ.1: ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದ ವಿವಿಧ ರೀತಿಯ ಯೋಜನೆಗಳು, ಅನುದಾನಕ್ಕೆ ಸಂಬಂಧಿಸಿದ ಸುಮಾರು 27 ಕೋಟಿ ರೂ.ಗಳನ್ನು ಸಹಕಾರಿ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ಗಳಲ್ಲಿ ನಿರಖು ಠೇವಣಿ (ಫಿಕ್ಸೆಡ್ ಡೆಪೋಸಿಟ್) ಇರಿಸಿರುವ ಬಗ್ಗೆ ಮನಪಾ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಶನಿವಾರ ನಡೆದಿದೆ.
ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸದಸ್ಯೆ ಕವಿತಾ ಮನಪಾಕ್ಕೆ ಸೇರಿದ ವಿವಿಧ ಹಣವನ್ನು ಹಲವಾರು ಬ್ಯಾಂಕ್ಗಳಲ್ಲಿ ಠೇವಣಿ ಇರಿಸಿರುವ ಬಗ್ಗೆ ಪ್ರಶ್ನಿಸಿದರು. ರಾಜ್ಯ ಸಚಿವ ಎಚ್.ಕೆ.ಪಾಟೀಲ್ರವರೇ 1,300 ಕೋ.ರೂ. ಸರಕಾರಿ ಹಣವನ್ನು ನಿರಖು ಠೇವಣಿ ಇರಿಸಿದ್ದಕ್ಕಾಗಿ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ. ಯಾವುದೇ ಕಾರಣಕ್ಕೂ ಸರಕಾರದ ದುಡ್ಡು ಬ್ಯಾಂಕ್ಗಳಲ್ಲಿ ಕೊಳೆಯಬಾರದು. ಅದು ಸಾರ್ವಜನಿಕರ ಉಪಯೋಗಕ್ಕೆ ಇರುವಂತಹದ್ದು. ಅದು ಉಪಯೋಗವಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಇಲ್ಲಿ ಮನಪಾದಲ್ಲಿ ಗುತ್ತಿಗೆದಾರರಿಗೆ ಹಣ ಪಾವತಿಯಾಗುತ್ತಿಲ್ಲ. ನೀರಿನ ಕಾಮಗಾರಿಗೆ ಸಂಬಂಧಿಸಿ ಹಣವಿಲ್ಲ ಎಂಬ ಸಬೂಬು ಅಧಿಕಾರಿ ಗಳಿಂದ ಬರುತ್ತಿದೆ. ಹಾಗಿದ್ದರೆ ಮನಪಾದ ಸುಮಾರು 27 ಕೋಟಿ ರೂ.ಗಳನ್ನು ನಾಲ್ಕೈದು ವರ್ಷಗಳಿಂದ ನಗರದ 80ಕ್ಕೂ ಅಧಿಕ ಬ್ಯಾಂಕ್ಗಳಲ್ಲಿ ನಿರಖು ಠೇವಣಿ ಇರಿಸಿದ್ದು ಹೇಗೆ? ಈ ಬಗ್ಗೆ ಮಾಹಿತಿ ನೀಡಬೇಕು ಮತ್ತು ಈ ರೀತಿ ಮನಪಾ ಅಧಿಕಾರಿಗಳಿಗೆ ಹಣವನ್ನು ನಿರಖು ಠೇವಣಿಯಲ್ಲಿ ಇರಿಸುವ ಅಧಿಕಾರವಿದೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮನಪಾ ಲೆಕ್ಕಾಧಿಕಾರಿಯವರು, ಮನಪಾಕ್ಕೆ ಸಂಬಂಧಿಸಿದ ಹಣವನ್ನು ನಿರಖು ಠೇವಣಿ ಇರಿಸಬಹುದಾಗಿದೆ ಎಂದು ಹೇಳಿದಾಗ ಸದಸ್ಯರನೇಕರು ಅದರಿಂದ ತೃಪ್ತರಾಗದೆ ಯಾವ್ಯಾವ ಬ್ಯಾಂಕ್ನಲ್ಲಿ ಹಣ ಫಿಕ್ಸೆಡ್ ಇರಿಸಲಾಗಿದೆ ಎಂದು ಪ್ರಶ್ನಿಸಿದರು.
ಈ ಸಂದರ್ಭ ಅಧಿಕಾರಿಯು, ಎಸ್ಎಫ್ಸಿ ಅನುದಾನ, ಇಎಂಡಿ, ನೀರು ಪೂರೈಕೆ, ಎಂಟರ್ಪ್ರೈಸಸ್ ನಿಧಿ, ಪಿ ಫಾರ್ ಮೊದಲಾದ ವಿವಿಧ ರೀತಿಯ ನಿಧಿಗಳನ್ನು ವಿವಿಧ ಬ್ಯಾಂಕ್ಗಳಲ್ಲಿ 2010 ರಿಂದಲೂ ನಿರಖು ಠೇವಣಿ ಇರಿಸಿರುವ ಮಾಹಿತಿ ನೀಡಿದರು.
ಸದಸ್ಯರು ಮತ್ತೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಪ್ರತಿಕ್ರಿಯಿಸಿದ ಆಯುಕ್ತ ಗೋಪಾಲಕೃಷ್ಣ, ಹಿಂದಿನ ಆಯುಕ್ತರು ಮನಪಾಕ್ಕೆ ಸಂಬಂಧಿಸಿದ ಹಣವನ್ನು ಉಳಿತಾಯ ಖಾತೆಯಲ್ಲಿ ಇರಿಸಿದರೆ ಹೆಚ್ಚಿನ ಬಡ್ಡಿ ಸಿಗುವುದಿಲ್ಲ ಎಂಬ ಕಾರಣಕ್ಕೆ ವಿಶೇಷ ಅಧಿಕಾರದಲ್ಲಿ ಅದನ್ನು ನಿರಖು ಠೇವಣಿ ಇರಿಸಿರಬಹುದು. ಮನಪಾಕ್ಕೆ ಸೇರಿದ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಠೇವಣಿ ಇರಿಸುವ ಅಧಿಕಾರವಿದೆ. ಸರಕಾರ ದಿಂದ ಬಂದ ಯಾವುದೇ ರೀತಿಯ ಅನುದಾನವನ್ನು ಠೇವಣಿ ಇರಿಸುವಂತಿಲ್ಲ ಎಂದು ಉತ್ತರಿಸಿದರು.
ರಾಷ್ಟ್ರೀಕೃತವಲ್ಲದ ಹಾಗೂ ಸಹಕಾರಿ ಬ್ಯಾಂಕ್ಗಳಲ್ಲೂ ಠೇವಣಿ ಇರಿಸಿರುವ ಬಗ್ಗೆ ಹಾಗೂ ಸರಕಾರದಿಂದ ಬಂದ ಅನುದಾನವನ್ನೂ ಠೇವಣಿ ಇರಿಸಲಾದ ಬಗ್ಗೆ ಮತ್ತೆ ಸದಸ್ಯರು ಆಕ್ಷೇಪಿಸಿದಾಗ ಮುಂದಿನ ಸಭೆಗೆ ಮಾಹಿತಿಯನ್ನು ಒದಗಿಸುವುದಾಗಿ ಆಯುಕ್ತರು ತಿಳಿಸಿದರು. ಸಭೆಯಲ್ಲಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ನಂದಿಗುಡ್ಡೆ ದಫನ ಭೂಮಿ ವಿವಾದ :
ನಂದಿಗುಡ್ಡೆ ಹಾಗೂ ಬೆಂಗ್ರೆಯ ಮನಪಾಕ್ಕೆ ಸೇರಿದ ಜಾಗದಲ್ಲಿ ಮನಪಾದ ಗಮನಕ್ಕೆ ತಾರದೆ ದಫನ ಭೂಮಿಗೆ ಅನುಮತಿ ನೀಡಲಾಗಿದೆ. ನಂದಿಗುಡ್ಡೆಯಲ್ಲಿ ಮುಸ್ಲಿಮ್ ದಫನ ಭೂಮಿ ಎಂದೂ, ಸಾರ್ವಜನಿಕ ರುದ್ರ ಭೂಮಿ ಎಂದೂ ವಿಶ್ಲೇಷಿಸುವ ಮೂಲಕ ತಾರತಮ್ಯ ಎಸಗಲಾಗಿದೆ ಎಂದು ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು ಸಭೆಯಲ್ಲಿ ಆರೋಪಿಸಿದರು.
ಮುಸ್ಲಿಮ್ ಸಮುದಾಯಕ್ಕೆ ದಫನ ಭೂಮಿಗೆ ಜಾಗ ನೀಡಲು ನಮ್ಮ ವಿರೋಧವಿಲ್ಲ. ಆದರೆ, ಮನಪಾದ ನಿರಕ್ಷೇಪಣಾ ಪತ್ರ ಪಡೆದುಕೊಳ್ಳಬೇ ಕೆಂದು ನಿರ್ಣಯ ಮಾಡಬೇಕು ಎಂದು ವಿಪಕ್ಷ ಸದಸ್ಯ ಪ್ರೇಮಾನಂದ ಶೆಟ್ಟಿ ಆಗ್ರಹಿಸಿದರು.
ಈ ಬಗ್ಗೆ ಕೆಲಹೊತ್ತಿನ ಚರ್ಚೆಯ ಬಳಿಕ ಪ್ರತಿಕ್ರಿಯಿಸಿದ ಮೇಯರ್ ಜೆಸಿಂತಾ, ನಂದಿಗುಡ್ಡೆಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ದಫನ ಭೂಮಿ ವಿಚಾರ ಸದ್ಯ ಸ್ಥಳ ಪರಿಶೀಲನೆಯ ಹಂತ ದಲ್ಲಿದೆ. ಮನಪಾದಿಂದ ನಿರಕ್ಷೇಪಣಾ ಪತ್ರ ಇನ್ನೂ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ವರದಿ ಕೃಪೆ : ವಾಭಾ