ಮಂಗಳೂರು :ಮೂಡಬಿದ್ರೆ ಭಜರಂಗದಳದ ಕಾರ್ಯಕರ್ತ, ನಾಟಕ ಕಲಾವಿದ ತೋಡಾರು ನಿವಾಸಿ ವಿಶ್ವನಾಥ ಶೆಟ್ಟಿ ಅವರ ಮೊಬೈಲ್ಗೆ ಶುಕ್ರವಾರ ತಡರಾತ್ರಿ ಇಂಟರ್ನೆಟ್ ಕರೆ ಮುಖಾಂತರ ಅನಾಮಧೇಯ ವ್ಯಕ್ತಿ ಜೀವಬೆದರಿಕೆ ಒಡ್ಡಿರುವ ಕುರಿತು ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಶುಕ್ರವಾರ ತಡರಾತ್ರಿ ವಿದೇಶದಿಂದ ಕರೆ ಮಾಡಿರುವ ದುಷ್ಕರ್ಮಿಯೊಬ್ಬ ಭಜರಂಗದಳ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಎಂಬವರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ‘ನೀನು ಬಾರಿ ಹಿಂದೂ ಸಂಘಟನೆಯಲ್ಲಿ ತೊಡಗುತ್ತೀಯಾ?. ಪ್ರಶಾಂತ್ನನ್ನು ಕೊಲೆ ಮಾಡಿದವರು ನಾವೇ. ದನ ಸಾಗಾಟ ಮಾಡುವಾಗ ತಡೆದು ನಿಲ್ಲಿಸುತ್ತೀಯಾ? ನಿನ್ನನ್ನು ಮುಂದಿನ ದಿನದಲ್ಲಿ ಕೊಚ್ಚಿ ಕೊಂದು ಹಾಕುವುದೇ ನನ್ನ ಮೊದಲ ಟಾರ್ಗೆಟ್’ ಎಂದಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.
ನಾಟಕ ಕಲಾವಿಧರೂ ಆಗಿರುವ ವಿಶ್ವನಾಥ್ಗೆ ಶುಕ್ರವಾರ್ರ ತಡರಾತ್ರಿ 1.20 ವೇಳೆಗೆ ಅವರ ಮೊಬೈಲ್ ಸಂಖ್ಯೆಗೆ ಅಂತರ್ಜಾಲ ಸಂಖ್ಯೆ +6744ರ ಮೂಲಕ ಕರೆ ಬಂದಿದ್ದು, ವಿಶ್ವನಾಥ ಅವರು ದೂರಿನ ಜೊತೆ ಬೆದರಿಕೆ ಕರೆಯ ವಾಯ್ಸ್ ರೆಕಾರ್ಡಿಂಗ್ ಅನ್ನು ಪೊಲೀಸರಿಗೆ ನೀಡಿದ್ದಾರೆ.
ಮೂಡಬಿದ್ರೆಯಲ್ಲಿ ಇತ್ತೀಚಿಗೆ ಹಾಡುಹಗಲೇ ದುಷ್ಕರ್ಮಿಗಳಿಂದ ಪ್ರಶಾಂತ್ ಪೂಜಾರಿ ಹತ್ಯೆಯಾದ ನಂತರ ಮೂಡುಬಿದಿರೆಯ ಸಂಘಪರಿವಾರ ನಾಯಕರು, ಬಿಜೆಪಿ ಮುಖಂಡರುಗಳಿಗೆ ವಿದೇಶದಿಂದ ಬರುತ್ತಿರುವ ಬೆದರಿಕೆ ಕರೆಗಳು ಹೆಚ್ಚುತ್ತಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳ ಮೇಲೆ ದೂರು ದಾಖಲಾಗುತ್ತಿದೆ.
ಗೋಸಾಗಾಟ ಸಂದರ್ಭ ಅಡ್ಡಗಟ್ಟುತ್ತಿದ್ದ ಮತ್ತು ಭಜರಂಗದಳದಲ್ಲಿ ಕಾರ್ಯಕರ್ತರಾಗಿದ್ದ ಹಲವು ಯುವಕರಿಗೆ ವಿದೇಶಗಳಿಂದ ಕರೆಮಾಡುವ ದುಷ್ಕರ್ಮಿಗಳು ಪ್ರಶಾಂತ್ ಹತ್ಯೆಯನ್ನು ಮಾಡಿದಂತೆಯೇ ನಿಮ್ಮನ್ನೂ ಕೂಡಾ ಕೊಲೆ ಮಾಡಲಿದ್ದೇವೆ ಎಂಬ ಎಚ್ಚರಿಕೆ ನೀಡುತ್ತಿರುವ ಬಗ್ಗೆ ದೂರು ದಾಖಲಾಗುತ್ತಿವೆ. ಇದನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ಸವಾಲಾಗಿದೆ.