ಬಾಲಿ, ನ.1-ಜಕಾರ್ತಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಕಾರ್ಯದರ್ಶಿ ಸಂಜೀವ್ಕುಮಾರ್ ಅಗರ್ವಾಲ್ ಅವರು ಇಲ್ಲಿನ ಕಾರಾಗೃಹದಲ್ಲಿರುವ ಭೂಗತ ಪಾತಕಿ ಛೋಟಾ ರಾಜನ್ನನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಬಂಧಿತ ಛೋಟಾ ರಾಜನ್ನನ್ನು ಭೇಟಿಯಾಗಿರುವ ಮೊತ್ತ ಮೊದಲ ಭಾರತೀಯ ರಾಯಭಾರ ಕಚೇರಿ ಅಧಿಕಾರಿ ಸಂಜೀವ್ಕುಮಾರ್ ಆಗಿದ್ದಾರೆ. ಭಾರತ ಮತ್ತು ಇಂಡೋನೇಷ್ಯಾ ಬಂಧಿತ ಪಾತಕಿಯ ಹಸ್ತಾಂತರ ಗಡಿಪಾರು ಇತ್ಯಾದಿ ಪ್ರಕ್ರಿಯೆಗಳ ಬಗ್ಗೆ ವಿಚಾರ ವಿನಿಮಯ ನಡೆಸುತ್ತಿರುವಾಗಲೇ ಕಾರ್ಯದರ್ಶಿ ಈ ಭೇಟಿ ನಡೆಸಿದ್ದಾರೆ.
ಭೂಗತ ಪಾತಕಿ, ಭಾರತದ ಮೋಸ್ಟ್ ವಾಂಟೆಡ್ ಛೋಟಾ ರಾಜನ್ನನ್ನು ಅ.24 ರಂದು ಇಂಡೋನೇಷ್ಯಾದ ಬಾಲಿ ಪೊಲೀಸರು ಬಂಧಿಸಿದ್ದರು. ಮುಂಬೈ ಒಂದರಲ್ಲೇ 68 ಪ್ರಕರಣಗಳಲ್ಲಿ ಈ ಪಾತಕಿ ಬೇಕಾಗಿದ್ದಾನೆ. 20 ಕೊಲೆ ಪ್ರಕರಣಗಳೂ ಅವನ ವಿರುದ್ಧ ದಾಖಲಾಗಿವೆ.