ಬೆಂಗಳೂರು, ನ. 12: ಪಾದಚಾರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಹಠಾತ್ತನೆ ಭೂ ಕುಸಿತದ ಹಿನ್ನೆಲೆಯಲ್ಲಿ ಸುಮಾರು 10 ಅಡಿ ಆಳದ ಗುಂಡಿಗೆ ಬಿದ್ದು ಸಣ್ಣ-ಪುಟ್ಟ ಗಾಯಗಳೊಂದಿಗೆ ಬದುಕಿ ಬಂದ ಘಟನೆ ಇಲ್ಲಿನ ಸಿಟಿ ಸಿವಿಲ್ ಕೋರ್ಟ್ ಬಳಿ ಸಂಭವಿಸಿದೆ.
ಭೂ ಕುಸಿತದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಆಳದ ಗುಂಡಿಗೆ ಬಿದ್ದ ನಂದ ಕುಮಾರ್ ಎಂಬವರು ಪವಾಡ ಸದೃಶ್ಯ ರೀತಿಯಲ್ಲಿ ಬದುಕಿ ಬಂದಿದ್ದಾರೆ. ಗುರುವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದ ಸಮೀಪದಲ್ಲಿನ ಸಿಟಿ ಸಿವಿಲ್ ಕೋರ್ಟ್ ಬಳಿಯ ಪಾದಚಾರಿ ರಸ್ತೆಯಲ್ಲಿ ನಂದ ಕುಮಾರ್ ತೆರಳುತ್ತಿದ್ದರು.
ಈ ವೇಳೆ ತಮ್ಮ ಕಾಲ ಕೆಳಗಿದ್ದ ನೆಲ ಕುಸಿದಿದ್ದು, ಸುಮಾರು 10 ಅಡಿ ಆಳದಲ್ಲಿ ಸಿಲುಕಿದರೂ, ವಿಚಲಿತರಾಗದ ನಂದಕುಮಾರ್, ಸ್ಥಳದಲ್ಲೇ ಇದ್ದ ಸಾರ್ವಜನಿಕರ ಸಹಾಯದಿಂದ ಗುಂಡಿಯಿಂದ ಮೇಲಕ್ಕೆ ಬಂದಿದ್ದಾರೆ. ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಭೂ ಕುಸಿತ ಉಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವಿಷಾದ: ಮೈಸೂರು ಬ್ಯಾಂಕ್ ವೃತ್ತದಲ್ಲಿನ ಸಿಟಿ ಸಿವಿಲ್ ಕೋರ್ಟ್ ಸಮೀಪ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆ ಹಿನ್ನೆಲೆಯಲ್ಲಿ ಭೂ ಕುಸಿತ ಉಂಟಾಗಿದೆ. ವ್ಯಕ್ತಿಯೊಬ್ಬರು ಭೂ ಕುಸಿತದ ಗುಂಡಿಗೆ ಬಿದ್ದಿರುವುದು ವಿಷಾದನೀಯ ಎಂದು ಬಿಎಂಆರ್ಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ.
ಸತತ ಮೂರು ದಿನಗಳಿಂದ ಸುರಿದ ಮಳೆ ಹಿನ್ನೆಲೆಯಲ್ಲಿ ಭೂ ಕುಸಿತ ಉಂಟಾಗಿದ್ದು, ದುಘರ್ಟನೆ ಸಂಭವಿಸಿದೆ. ಈ ಬಗ್ಗೆ ಗುತ್ತಿಗೆದಾರರಿಂದ ಸ್ಪಷ್ಟನೆ ಕೋರಲಾಗುವುದು. ಅಲ್ಲದೆ, ಲೋಪ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಖರೋಲಾ ತಿಳಿಸಿದ್ದಾರೆ.