ಕರ್ನೂಲು, ನ.29: ಜಿಲ್ಲೆಯ ಆತ್ಮಕೂರಿನಲ್ಲಿ ಸಂಘ ಪರಿವಾರದ ಇಬ್ಬರು ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರು ಅವರು ವ್ಯಾನೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶ ಪಡಿಸಿಕೊಂಡಿದ್ದಾರೆ. 1.5 ಟನ್ ಅಮೋನಿಯಂ ನೈಟ್ರೇಟ್, 2,680 ಡಿಟೋನೇಟರ್ಗಳು, 1,200 ಜಿಲೇಟಿನ್ ಕಡ್ಡಿಗಳು, 1,200 ಮೀ.ಫ್ಯೂಸ್ ವೈರ್ ಮತ್ತು 180 ಬೂಸ್ಟರ್ಗಳು ಇವುಗಳಲ್ಲಿ ಸೇರಿವೆ.
ಮಾಹಿತಿಯ ಮೇರೆಗೆ ವ್ಯಾನನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಯಾವುದೇ ಪರವಾನಿಗೆ ಅಥವಾ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಸ್ಫೋಟಕಗಳು ಪತ್ತೆಯಾಗಿವೆ. ಈ ಹಿಂದೆ ಸ್ಫೋಟಕ ಪ್ರಕರಣವೊಂದರಲ್ಲಿಆರೋಪಿಯಾಗಿರುವ ಐತ್ವಾ ಶ್ರೀನಿವಾಸ್ ಮತ್ತು ವ್ಯಾನ್ ಚಾಲಕ ಬೋಯಾ ಸುರೇಶ್ ಅವರನ್ನು ಬಂಧಿಸಲಾಗಿದೆ ಎಂದು ಆತ್ಮಕೂರು ಡಿಎಸ್ಪಿ ಕೆ.ಸುಪ್ರಜಾ ತಿಳಿಸಿದರು.
ಬಂಧಿತರಿಬ್ಬರೂ ತೀವ್ರಗಾಮಿ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರೆಂದು ಹೇಳಲಾಗಿದೆ.
ಈ ಸ್ಫೋಟಕಗಳನ್ನು ಕರ್ನೂಲು ಜಿಲ್ಲೆಯ ಒರ್ವಕಲ್ನಿಂದ ಪ್ರಕಾಶಂ ಜಿಲ್ಲೆಯ ದೊರ್ನಾಲಾಕ್ಕೆ ಸಾಗಿಸಲಾಗುತ್ತಿತ್ತು.
ಕರ್ನೂಲಿನಲ್ಲಿ ಗಿರಿ ಎಂಬಾತನಿಂದ ತಾವು ಈ ಸ್ಫೋಟಕಗಳನ್ನು ಖರೀದಿಸಿದ್ದು, ವೇಲಿಗೊಂಡಾ ಯೋಜನೆಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಉಪ ಗುತ್ತಿಗೆದಾರನಿಗಾಗಿ ಸಾಗಿಸುತ್ತಿದ್ದುದಾಗಿ ಬಂಧಿತ ವ್ಯಕ್ತಿಗಳು ಹೇಳಿದ್ದಾರೆ. ಅವರ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಸುಪ್ರಜಾ ತಿಳಿಸಿದರು.