ಕನ್ನಡ ವಾರ್ತೆಗಳು

ಪ್ರೀತಿಯ ಹೆಸರಿನಲ್ಲಿ ಯುವತಿಗೆ ಕಿರುಕುಳ,ಅತ್ಯಾಚಾರಕ್ಕೆ ಯತ್ನ; ಆರೋಪಿ ಅರೆಸ್ಟ್

Pinterest LinkedIn Tumblr

ಕುಂದಾಪುರ: ಪ್ರೀತಿಯ ಹೆಸರಿನಲ್ಲಿ ಕೆಲವು ತಿಂಗಳುಗಳಿಂದ ಅಪ್ರಾಪ್ತ ಯುವತಿಯೋರ್ವಳಿಗೆ ಕಿರುಕುಳ ನೀಡುತ್ತಿದ್ದ ಯುವಕನೋರ್ವ ಆಕೆಯ ಮನೆಗೆ ನುಗ್ಗಿ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ವಂಡಾರು ನಿವಾಸಿಯಾದ ಸುಧಾಕರ್ ಶೆಟ್ಟಿ (23) ಎಂಬಾತನನ್ನು ಪೊಲೀಸರು ಸದ್ಯ ಬಂಧಿಸಿದ್ದಾರೆ.

Shankaranarayana_Pocso_Case

ಆಗಿದ್ದೇನು?: ವಂಡಾರಿನವನಾದ ಸುಧಾಕರ ಶೆಟ್ಟಿ ಸಿದ್ದಾಪುರ ಸಮೀಪದ ಹೋಟೇಲೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಿದ್ದಾಪುರದಲ್ಲಿಯೇ ಬಾಡಿಗೆ ಕೋಣೆಯೊಂದನ್ನು ಪಡೆದು ವಾಸ್ತವ್ಯವಿದ್ದ. ಈತನ ಬಾಡಿಗೆ ಕೋಣೆ ಸಮೀಪವೇ ಇದ್ದ ದಲಿತ (ಪರಿಶಿಷ್ಟ ಜಾತಿ) ಅಪ್ರಾಪ್ತ ಯುವತಿಯೋರ್ವಳನ್ನು ಕೆಲವು ತಿಂಗಳುಗಳಿಂದ ಪ್ರೀತಿಸುತ್ತಿದ್ದ ಸುಧಾಕರ್ ಆಕೆಗೆ ಪ್ರೇಮಪತ್ರ ನೀಡಿದ್ದಲ್ಲದೇ ಆಕೆಯ ಹಿಂದೆಬಿದ್ದು ಕಿರುಕುಳವನ್ನು ನೀಡುತ್ತಿದ್ದ. ಸಿದ್ದಾಪುರದಲ್ಲಿ ಹತ್ತನೇ ತರಗತಿ ಓದುತ್ತಿದ್ದ ಹದಿನಾರು ವರ್ಷದವಳಾದ ಈ ಯುವತಿ ಇದರಿಂದ ಬೇಸತ್ತಿದ್ದಳು. ಮೊನ್ನೆ ದಿನ ಆಕೆ ಮನೆಗೆ ಅಕ್ರಮ ಪ್ರವೇಶ ಮಾಡಿದ ಆತ ಅಪ್ರಾಪ್ತ ಯುವತಿಯೋರ್ವಳಿಗೆ ಪ್ರೀತಿಸುವಂತೆ ಬೆದರಿಕೆಯೊಡ್ಡಿದ್ದಲ್ಲದೇ ಆಕೆಯ ಅತ್ಯಾಚಾರಕ್ಕೂ ಯತ್ನಿಸಿದ್ದಾನೆ. ಯುವತಿ ಕೂಗಾಟ ಕೇಳಿ ಮನೆಯವರು ಹಾಗೂ ಆಸುಪಾಸಿನವರು ಬರುವ ವೇಳೆ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ.

ನೊಂದ ಯುವತಿ ಮನೆಯವರು ಈ ಬಗ್ಗೆ ಶಂಕರನಾರಾಯಣ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಫೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.

Write A Comment