ಮಂಗಳೂರು : ನಗರದ ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನವನ್ನು ಸುಮಾರು 60 ಲಕ್ಷ ರೂ.ವೆಚ್ಚದಲ್ಲಿ ಮರು ನಿರ್ಮಾಣ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಡಿ.24ರಿಂದ 29ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಎಂದು ದೈವಸ್ಥಾನದ ಗುರಿಕಾರ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀ ಎಸ್.ರಾಘವೇಂದ್ರ ಅವರು ಮಾಹಿತಿ ನೀಡಿದರು.
ಶನಿವಾರ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 24-12-2015ನೇ ಗುರುವಾರ ಅಪರಾಹ್ನ 3.00ಗಂಟೆಗೆ ಹಸಿರುವಾಣಿ, ಹೊರೆಕಾಣಿಕೆ ಮೆರವಣಿಗೆ ಕಂಕನಾಡಿ ಬಸ್ ನಿಲ್ದಾಣದಿಂದ ವೆಲೆನ್ಸಿಯಾ ಮಾರ್ಗವಾಗಿ ಶ್ರೀ ಕ್ಷೇತ್ರಕ್ಕೆ ಬರಲಿದೆ. ಶ್ರೀ ಮಂಗಳಾದೇವಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಮಾನಾಥ ಹೆಗ್ಡೆಯವರು ಹಸಿರುವಾಣಿ ಮೆರವಣಿಗೆಯ ಉದ್ಘಾಟನೆ ನೆರವೇರಿಸಲಿರುವರು.
ಧರ್ಮದರ್ಶಿ ಶ್ರೀ ಭಾಸ್ಕರ್ ಐತಾಳ್ ರವರ ನೇತೃತ್ವದಲ್ಲಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ವೈದಿಕ ವಿಧಿ ವಿಧಾನಗಳು ಡಿಸೆಂಬರ್ 25ನೇ ಶುಕ್ರವಾರದಂದು ಬೆಳಿಗ್ಗೆ 6.00 ಗಂಟೆಯಿಂದ ಆರಂಭಗೊಳ್ಳಲಿದೆ. ನಂತರ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದರ್ಶನ ಸೇವೆ ನಡೆದು ಪ್ರಸಾದ ವಿತರಣೆಯಾಗಲಿದೆ. ಮಧ್ಯಾಹ್ನ 2-00 ಗಂಟೆಯಿಂದ ಸಂಕೀರ್ತನ ಭಜನಾ ಮಂಡಳಿ, ಕಾಪು, ಉಚ್ಚಿಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5.00 ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ ಎಂದು ತಿಳಿಸಿದರು.
ಸಂಜೆ 6.00 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಇದರ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ. ರಮಾನಾಥ ರೈಯವರು ಪುನರ್ನಿರ್ಮಾಣಗೊಂಡ ದೈವಸ್ಥಾನದ ಉದ್ಘಾಟನೆ ನೆರವೇರಿಸಲಿರುವರು.
ಮಂಗಳೂರು ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್.ಲೋಬೋ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿ’ಸೋಜ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಜೆಸಿಂತಾ ವಿಜಯ್ ಆಲ್ಫ್ರೆಡ್, ಕಾರ್ಪೋರೇಟರ್ ಕು.ಅಪ್ಪಿ.ಎಸ್. ಚಿರಾಮಿತ್, ಪ್ರಿಸ್ಸಿಯನ್(ಇಂಡಿಯಾ) ಇದರ ನಿರ್ದೇಶಕರಾದ ಶ್ರೀ ಬೆರಾಗ್ ರಾಮಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ರಾತ್ರಿ 8.00ಗಂಟೆಯಿಂದ ‘ಕಲಾಸಾರಥಿ’ ತೋನ್ಸೆ ಪುಷ್ಕಳ್ ಕುಮಾರ್ ಅವರಿಂದ ‘ಕಾರ್ನಿಕದ ಬಬ್ಬುಸ್ವಾಮಿ’ ತುಳು ಹರಿಕಥೆ ಹಾಗೂ ಆಯ್ದ ನೃತ್ಯ ತಂಡಗಳಿಂದ ‘ನೃತ್ಯ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಡಿಸೆಂಬರ್ 26ರಿಂದ 29ರವರೆಗೆ ನೇಮೋತ್ಸವ:
ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಡಿಸೆಂಬರ್ 26ರಿಂದ 29ರವರೆಗೆ ನಡೆಯಲಿದೆ. ಡಿಸೆಂಬರ್ 26ರಂದು ಬೆಳಿಗ್ಗೆ ಬಬ್ಬುಸ್ವಾಮಿ ಪರಿವಾರದೈವಗಳ ದರ್ಶನ ಸೇವೆಯ ಮೂಲಕ ಭಂಡಾರ ಏರಿ, ಮಧ್ಯಾಹ್ನ ಸ್ಥಳದ ಗುಳಿಗ ದೈವದ ನೇಮ, ರಾತ್ರಿ ಶ್ರೀ ಬಬ್ಬುಸ್ವಾಮಿ ಹಾಗೂ ತನ್ನಿಮಾನಿಗ ನೇಮೋತ್ಸವ.
ಡಿಸೆಂಬರ್ 27ರಂದು ಮಧ್ಯಾಹ್ನ ರಾಹುಗುಳಿಗ ದೈವದ ನೇಮ, ರಾತ್ರಿ ಪಂಜುರ್ಲಿ-ಗುಳಿಗ ದೈವದ ನೇಮೋತ್ಸವ. ಡಿಸೆಂಬರ್ 28ರಂದು ಮಧ್ಯಾಹ್ನ ಧರ್ಮದೈವದ ನೇಮ, ರಾತ್ರಿ ಸುಬ್ಬಿಗುಳಿಗ ಹಾಗೂ ಸುಬ್ಯಮ್ಮ ದೈವಗಳ ನೇಮೋತ್ಸವ. ಡಿಸೆಂಬರ್ 29ರಂದು ಮಧ್ಯಾಹ್ನ ಸಂಕಳೆಗುಳಿಗ ದೈವದ ನೇಮ, ರಾತ್ರಿ ಶ್ರೀ ಕೊರಗಜ್ಜ ದೈವದ ನೇಮ ನಡೆದು ಬಳಿಕ ಭಂಡಾರ ಇಳಿಯುವುದು ಎಂದು ರಾಘವೇಂದ್ರ ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ, ಎಸ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷೆ ಅಪ್ಪಿ.ಎಸ್, ಕ್ಷೇತ್ರದ ಅಧ್ಯಕ್ಷ ಕೆ.ಪಾಂಡುರಂಗ, ಅರ್ಚಕ ಗಣೇಶ್, ಪದಾಧಿಕಾರಿಗಳಾದ ಬಿ.ವಿಶ್ವನಾಥ್ ಸಾಲ್ಯಾನ್, ಮಲ್ಲಿಕಾರ್ಜುನ್, ಎಸ್.ಬಾಬು, ಎಸ್.ನವೀನ್ ಮುಂತಾದವರು ಉಪಸ್ಥಿತರಿದ್ದರು.