ಕೋಲಾರ, ಡಿ.13: ಅಧಿಕಾರ ಶಾಶ್ವತವಲ್ಲ, ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ಮಟ್ಟ ಹಾಕುವಂತಹ ಹೀನ ಕೃತ್ಯಕ್ಕೆ ಕೈ ಹಾಕಬೇಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದರು.
ಜೆಡಿಎಸ್ ಪಕ್ಷದಲ್ಲಿನ ಭಿನ್ನಮತ ಶಮನಗೊಳಿಸಲು ಕೋಲಾರಕ್ಕೆ ಬಂದಿದ್ದ ಅವರು ಮಾಜಿ ಸಚಿವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದು, ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸುತ್ತಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ ಎಂದರು.
ಇದರ ಬಗ್ಗೆ ಗೃಹ ಮಂತ್ರಿಗಳೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ. ಅವರು ದೂರವಾಣಿಗೆ ಸಿಕ್ಕಿಲ್ಲ. ಕೂಡಲೇ ಗೃಹ ಸಚಿವರು ಮತ್ತು ಪೊಲೀಸ್ ಮಹಾ ನಿರ್ದೇಶಕರ ಗಮನಕ್ಕೆ ತರುವುದಾಗಿ ತಿಳಿಸಿದರು.
ಇದೇ ವೇಳೆ ಯಾವುದೇ ದಬ್ಬಾಳಿಕೆಗೆ ಮಣಿಯಬೇಡಿ ಎಂದು ಕಾರ್ಯಕರ್ತರಿಗೆ ತಿಳಿಸಿದ್ದೇನೆ. ಚುನಾವಣೆಯ ಸಂದರ್ಭದಲ್ಲಿ ಬಂಡಾಯ ಎಂಬುದು ಇದ್ದದ್ದೆ. ಪಕ್ಷಕ್ಕೆ ದುಡಿದಂತಹವರು ಸ್ಥಾನವನ್ನು ಅಪೇಕ್ಷಿಸುವುದು ಸಹಜ. ಸ್ಥಾನ ಸಿಕ್ಕದಿದ್ದಾಗ ಅಸಮಾಧಾನದ ಮಾತುಗಳೂ ಸಹಜ ಈಗ ಎಲ್ಲಾ ಬಗೆಹರಿದಿದೆ. ನಾವೆಲ್ಲಾ ಒಂದೇ ಕುಟುಂಬದಂತೆ ಸಂಘಟಿತರಾಗಿ ಪಕ್ಷವನ್ನು ಬಲಪಡಿಸುತ್ತೇವೆ ಎಂದು ಹೇಳಿದರು.
ಜೆಡಿಎಸ್ ಅಭ್ಯರ್ಥಿ ಮನೋಹರ್ ಮಾತನಾಡಿ, ರಾಜಕಾರಣ ನನಗೇನೂ ಹೊಸದೇನಲ್ಲ. ಎಲ್ಲರೂ ಒಟ್ಟಾಗಿ ದುಡಿದು ನನ್ನನ್ನು ಗೆಲ್ಲಿಸಿ, ಮುಂಬರುವ ಜಿ.ಪಂ ಮತ್ತು ತಾ.ಪಂ.ಚುನಾವಣೆಗಳಲ್ಲಿ ನಿಮ್ಮೊಟ್ಟಿಗೆ ಇದ್ದು ಪಕ್ಷವನ್ನು ಬಲಪಡಿಸೋಣ. ಇಲ್ಲಿಗೆ ಶಾಶ್ವತ ನೀರಾವರಿ ಬೇಕಿದೆ. ಅದಕ್ಕೆ ಈಗಿನಿಂದಲೇ ಜೆಡಿಎಸ್ ಪಕ್ಷವನ್ನು ಬಲಪಡಿಸಿ ಕುಮಾರಣ್ಣ ಅವರನ್ನು ಸಿಎಂ ಮಾಡಿದಾಗ ಮಾತ್ರ ಜಿಲ್ಲೆಗೆ ಶಾಶ್ವತ ನೀರಾವರಿ ಸಾಧ್ಯ ಎಂದರು.