ಕರ್ನಾಟಕ

ಒಳ್ಳೆಯ ರೀತಿಯಲ್ಲಿ ಬದುಕಲು ಬಿಡದವನನ್ನು ಕೊಂದು ಪೊಲೀಸರಿಗೆ ಶರಣಾದ

Pinterest LinkedIn Tumblr

murder

ಶಿರಾ, ಡಿ.13: ಹಣಕ್ಕೆ ಪೀಡಿಸುತ್ತಿದ್ದನೆಂಬ ಕಾರಣಕ್ಕೆ ಸ್ನೇಹಿತರ ನಡುವೆ ಜಗಳ ನಡೆದು ಒಬ್ಬನ ಕೊಲೆಯಾಗಿ ಮತ್ತೊಬ್ಬನಿಗೆ ತೀವ್ರ ಗಾಯಗಳಾಗಿರುವ ಘಟನೆ ಶಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ವಾಸಿ ಹುಸೇನ್ (35) ಉರುಫ್ ಬಾಬು ಕೊಲೆಯಾದ ದುರ್ದೈವಿ. ವಿವರ: ಕೊಲೆಯಾದ ಹುಸೇನ್, ಕೊಲೆ ಮಾಡಿರುವ ರೇಹಾನ್ ಹಾಗೂ ಮತ್ತಿಬ್ಬರು ಹಿಂದಿನಿಂದಲೂ ಸ್ನೇಹಿತರಾಗಿದ್ದರು. ಕೆಲ ತಿಂಗಳ ಹಿಂದೆ ನಾಲ್ವರ ನಡುವೆ ಜಗಳವಾಗಿತ್ತು. ಜತೆಗೆ ಯಾವುದೋ ಕೊಲೆ ಸಂಬಂಧದಲ್ಲಿ ಇವರೆಲ್ಲ ಭಾಗಿಯಾಗಿದ್ದು ಕೇಸು ನಡೆಯುತ್ತಿದೆ. ಇದಾದ ನಂತರ ರೇಹಾನ ಇವರ ಸಹವಾಸ ಬೇಡವೆಂದು ತುಮಕೂರಿಗೆ ಹೋಗಿ ನೆಲೆಸಿದ್ದ. ಆದರೂ ಹಸೇನ್ ಮತ್ತು ಸಂಗಡಿಗರು ಸದಾ ಹಣ ಕೊಡುವಂತೆ ರೇಹಾನ್‌ನನ್ನು ಒತ್ತಾಯಿಸುತ್ತಿದ್ದರು.

ನಿನ್ನೆ ಕೂಡ ಫೋನ್ ಮಾಡಿ ಹಣ ತೆಗೆದುಕೊಂಡು ಬರುವಂತೆ ಹಸೇನ್ ಮತ್ತು ಸಂಗಡಿಗರು ಒತ್ತಾಯಿಸಿದ್ದಾರೆ. ಒತ್ತಾಯಪೂರ್ವಕವಾಗಿ ರೇಹಾನ್‌ನನ್ನು ಕರೆಸಿಕೊಂಡು ಮದ್ಯಪಾನ ಮಾಡಿ ಕ್ಯಾತೆ ತೆಗೆದಿದ್ದಾರೆ. ಈ ವೇಳೆ ಜಗಳವಾಗಿ ಕೈ ಕೈ ಮಿಲಾಯಿಸಿದ್ದಾರೆ. ಸಿಟ್ಟಿನಿಂದ ರೇಹಾನ್ ಚಾಕುವಿನಿಂದ ಹುಸೇನ್ ನನ್ನು ಇರಿದು ಕೊಂದಿದ್ದಾನೆ.

ನಂತರ ನೇರವಾಗಿ ಶಿರಾ ಠಾಣೆಗೆ ಬಂದು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ನಡೆದ ವಿಷಯ ತಿಳಿಸಿದ್ದಾನೆ. ನಾನು ಒಳ್ಳೆಯವನಾಗಿ ಬದುಕಬೇಕೆಂದರೂ ಸ್ನೇಹಿತರು ಬಿಡಲಿಲ್ಲ. ಹಾಗಾಗಿ ಸಿಟ್ಟಿನಿಂದ ರೇಹಾನ್‌ನನ್ನು ಕೊಲೆ ಮಾಡಿದ್ದೇನೆಂದು ಪೊಲೀಸರಿಗೆ ತಿಳಿಸಿದ್ದಾನೆಂದು ತಿಳಿದುಬಂದಿದೆ. ಮತ್ತೊಬ್ಬನಿಗೂ ತೀವ್ರತರದ ಗಾಯಗಳಾಗಿದ್ದು, ಆತನ ಹೆಸರು ತಿಳಿದುಬಂದಿಲ್ಲ. ಶಿರಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Write A Comment