ಕಲಬುರಗಿ, ಡಿ.13: ಬುಲೆಟ್ ಟ್ರೈನ್ನಿಂದ ದೇಶದ ಜನಸಾಮಾನ್ಯರಿಗೆ ಯಾವುದೇ ಉಪಯೋಗವಾಗುವುದಿಲ್ಲ. ಇದು ಪ್ರಧಾನಿ ಮೋದಿಯವರು ಶ್ರೀಮಂತರಿಗೆ ಮಾಡಿದ ಯೋಜನೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಲೆಟ್ ಟ್ರೈನ್ನಿಂದ ಬಡವರಿಗೆ, ಜನಸಾಮಾನ್ಯರಿಗೆ ಯಾವುದೇ ಉಪಯೋಗವಿಲ್ಲ. ದೊಡ್ಡ ಉದ್ಯಮಿಗಳಿಗೆ ಪ್ರಧಾನಿ ಮೋದಿ ನೀಡಿರುವ ಕೊಡುಗೆಯಷ್ಟೆ ಎಂದು ಹೇಳಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಪ್ರಕರಣ ಮುಗಿದ ಅಧ್ಯಾಯ. ಆದರೆ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಹಿನ್ನೆಲೆಯಲ್ಲಿ ಅದಕ್ಕೆ ಮರುಜನ್ಮ ನೀಡಿದೆ ಎಂದು ಆರೋಪಿಸಿದರು.
ಜಿಎಸ್ಟಿ ಮಸೂದೆಗೆ ಕಾಂಗ್ರೆಸ್ ವಿರೋಧವಿಲ್ಲ. ಈ ಮಸೂದೆಯಲ್ಲಿ ಏಕರೂಪ ತೆರಿಗೆ ತರಬೇಕೆಂದು ನಮ್ಮ ಆಗ್ರಹ. ಅದನ್ನು ಮಾಡಿದರೆ ನಮ್ಮ ಪಕ್ಷ ಬೆಂಬಲ ನೀಡಲಿದೆ ಎಂದು ಹೇಳಿದರು. ಬಿಜೆಪಿ ನಾಯಕರ ಹೇಳಿಕೆಗಳಿಂದಲೇ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ. ಮೊದಲು ಅವರು ತಮ್ಮ ಹೇಳಿಕೆಗಳನ್ನು ನಿಲ್ಲಿಸಲಿ ಎಂದು ತಿಳಿಸಿದರು.