ನವದೆಹಲಿ, ಡಿ.13: ಇಲಾಖೆಗೆ ಸೇರಿದ ಜಾಗ ತೆರವು ಕಾರ್ಯಾಚರಣೆ ವೇಳೆ 6 ತಿಂಗಳ ಮಗುವೊಂದು ಸಾವನ್ನಪ್ಪಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೆಂಡಾಮಂಡಲವಾದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ನಿರ್ವಸಿತರಾದ ಬಡವರಿಗೆ ಅನ್ನಾಹಾರಗಳ ವ್ಯವಸ್ಥೆ ಮಾಡಿಲ್ಲವೆಂದು ಕೇಜ್ರಿವಾಲ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಗುವಿನ ಸಾವಿಗೆ ನಾವು ಕಾರಣರಲ್ಲ. ನಾವು ತೆರವು ಕಾರ್ಯಾಚರಣೆ ಆರಂಭಿಸುವ ಮೊದಲೇ ಮಗು ಸಾವನ್ನಪ್ಪಿತ್ತು. ನಾವು ಬೆಳಗ್ಗೆ 10 ಗಂಟೆಗೆ ಕಾರ್ಯಾಚರಣೆ ಆರಂಭಿಸಿದೆವು. ಆ ವೇಳೆಗಾಗಲೇ ಮಗು ಸಾವನ್ನಪ್ಪಿತ್ತು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದರೆ, ಇಲ್ಲ, ಮಗು ಕಾರ್ಯಾಚರಣೆ ವೇಳೆಯೇ ಮೃತಪಟ್ಟಿದೆ.
ಒಂದು ಪೆಂಡಿಯಷ್ಟು ಬಟ್ಟೆಗಳು ಮೇಲೆ ಬಿದ್ದಿದ್ದರಿಂದ ಉಸಿರುಕಟ್ಟಿ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಈ ಮೊದಲೇ ನೋಟಿಸ್ ನೀಡಿದ್ದರೂ ಅತಿಕ್ರಮಣಕಾರರು ಮನೆಗಳನ್ನು ತೆರವುಗೊಳಿಸಿಲ್ಲ. ಇನ್ನೂ ಹೊಸದಾಗಿಯೂ ಕೆಲವರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಮನೆಯವರೆಲ್ಲಾ ಮನೆ ತೆರವುಗೊಳಿಸಲು ಬಟ್ಟೆಗಳನ್ನು ಮೂಟೆ ಕಟ್ಟುತ್ತಿದ್ದಾಗ ಬಟ್ಟೆಯ ರಾಶಿಯೇ ಮಗುವಿನ ಮೇಲೆ ಬಿದ್ದಿದೆ. ಅದನ್ನು ಯಾರೂ ಗಮನಿಸಿಲ್ಲ. ಮಗು ಉಸಿರುಗಟ್ಟಿ ಮೃತಪಟ್ಟಿದೆ ಎಂದು ಪೊಲೀಸ್ ಅಧಿಕಾರಿ ದೀಪೇಂದ್ರ ಪಾಠಕ್ ತಿಳಿಸಿದ್ದಾರೆ.
ಮಧ್ಯರಾತ್ರಿ ಗಲಾಟೆ ಆರಂಭವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಕೇಜ್ರಿವಾಲ್, ಮಧ್ಯರಾತ್ರಿಯೇ ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಇಬ್ಬರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ಗಳೂ ಸೇರಿದಂತೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದರು ಎಂದು ಮೂಲಗಳು ತಿಳಿಸಿವೆ.