ನವದೆಹಲಿ, ಡಿ.14-ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ನನ್ನ ಪಾತ್ರವಿರುವುದನ್ನು ಸಾಬೀತುಗೊಳಿಸಲು ಸಾಧ್ಯವಿಲ್ಲ ಎಂದು ಜಮಾತ್ ಉದ್ ದವಾಹ್ (ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಭಾರತಕ್ಕೆ ಸವಾಲು ಹಾಕಿದ್ದಾನೆ.
ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿ, ಅಲ್ಲಿನ ರಕ್ಷಣಾ ಖಾತೆ ಸಲಹೆಗಾರ ಸರ್ತಾಜ್ ಅಜೀಜ್ ಸೇರಿದಂತೆ ಹಲವು ನಾಯಕರ ಜೊತೆ ಮಾತುಕತೆ ನಡೆಸಿ ಮರಳಿದ ಬೆನ್ನಲ್ಲೇ ಉಗ್ರ ಹಫೀಜ್ ಈ ಸವಾಲು ಹಾಕಿದ್ದಾರೆ. ನಮ್ಮ ಸರ್ಕಾರ ಬಾಯಿ ಮುಚ್ಚಿಕೊಂಡಿದೆ.
ಆದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ನಾನು ಉತ್ತರಿಸುತ್ತೇನೆ. ಘಟನೆ ನಡೆದು ಇಲ್ಲಿಗೆ 7 ವರ್ಷಗಳು ಕಳೆದಿವೆ. ಇದುವರೆಗೂ ಯಾವುದೇ ಖಚಿತ ಪುರಾವೆ ಒದಗಿಸಲು ಸಾಧ್ಯವಾಗಿಲ್ಲ. ಮುಂಬೈ ದಾಳಿ ಪ್ರಕರಣದ ಹಿಂದೆ ನನ್ನ ಕೈವಾಡವಿದೆ ಎಂಬ ಬಗ್ಗೆ ಯಾವ ಪುರಾವೆಯನ್ನೂ ದೃಢೀಕರಿಸಲು ಆಗಿಲ್ಲ. ಅಲ್ಲಾಹುವಿನ ಇಚ್ಛೆ ಅದೇ ಆಗಿದ್ದರೆ ಅದನ್ನು ಸಾಬೀತುಪಡಿಸಲು ಯಾರಿಂದಲೂ ಸಾಧ್ಯವಾಗದು ಎಂದು ಹಫೀಜ್ ಸಯೀದ್ ಹೇಳುರುವ ವೀಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದೆ.
2008ರ ಮುಂಬೈ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಸಾಕ್ಷ್ಯ ಒದಗಿಸುವಲ್ಲಿ ಭಾರತ ವಿಫಲವಾಗಿದೆ ಎಂದು ಹಫೀಜ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರ ಜತೆ ಮಾತುಕತೆ ನಡೆಸಿರುವ ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ಹಫೀಜ್ ತರಾಟೆಗೆ ತೆಗೆದುಕೊಂಡಿದ್ದಾರೆ.