ನವದೆಹಲಿ, ಡಿ.14-ತಾವು ಇತ್ತೀಚೆಗೆ ಅಸ್ಸಾಂ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭ ಅಲ್ಲಿನ ಬಾರ್ಸೇಟದಲ್ಲಿರುವ ದೇವಸ್ಥಾನವೊಂದಕ್ಕೆ ತೆರಳಿದಾಗ ಆರ್ಎಸ್ಎಸ್ ಕಾರ್ಯಕರ್ತರು ನನಗೆ ಪ್ರವೇಶಾವಕಾಶ ನೀಡಲಿಲ್ಲ ಎಂದು ಹೇಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿಯ ಈ ಆಡಳಿತ ವ್ಯವಸ್ಥೆ ಸ್ವೀಕಾರಾರ್ಹವಲ್ಲ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸಭೆಗೆ ಕೇರಳ ಮುಖ್ಯಮಂತ್ರಿಯನ್ನು ಆಹ್ವಾನಿಸದೆ ಸಾಂವಿಧಾನಿಕವಾಗಿ ಅಧಿಕಾರದಲ್ಲಿರುವ ರಾಜ್ಯದ ಮುಖ್ಯಸ್ಥರಿಗೆ ಅವಮಾನ ಮಾಡಲಾಗಿದ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಸರ್ಕಾರದ ವಿರುದ್ಧ ಸಂಸತ್ತಿನ ಹೊರಗೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ರಾಹುಲ್ ಸುದ್ದಿಗಾರರ ಜೊತೆ ಮಾತನಾಡಿದರು.
ನಾವು ಅಸ್ಸಾಂಗೆ ತೆರಳಿದ್ದಾಗ, ಅಲ್ಲಿನ ಬಾರಾಪೇಟ್ ಜಿಲ್ಲೆಯಲ್ಲಿರುವ ದೇವಸ್ಥಾನವೊಂದಕ್ಕೆ ಭೇಟಿ ನೀಡುವುದಕ್ಕಾಗಿ ಹೋಗಿದ್ದೆ. ಆದರೆ, ಅಲ್ಲಿನ ಆರ್ಎಸ್ಎಸ್ ಕಾರ್ಯಕರ್ತರು ನಾನು ದೇವಸ್ಥಾನ ಪ್ರವೇಶಿಸದಂತೆ ತಡೆದರು. ಇದು ಬಿಜೆಪಿ ಸರ್ಕಾರದ ಆಡಳಿತ ವೈಖರಿ ಎಂದು ರಾಹುಲ್ ಆರೋಪಿಸಿದರು.
ಸಂಘಟನೆಯ ಮಹಿಳೆಯೊಬ್ಬಳನ್ನು ದೇವಸ್ಥಾನದ ಬಳಿ ನನ್ನೆದುರು ನಿಲ್ಲಿಸಲಾಯಿತು. ನೀವು ದೇವಸ್ಥಾನ ಪ್ರವೇಶಿಸುವಂತಿಲ್ಲ ಎಂದು ಮಹಿಳೆ ನನಗೆ ಹೇಳಿದಳು. ಈ ರೀತಿ ನನ್ನ ದೇವಸ್ಥಾನ ಪ್ರವೇಶ ತಡೆಯಲು ಅವರು ಯಾರು ಎಂದು ರಾಹುಲ್ ಪ್ರಶ್ನಿಸಿದರು. ಕಳೆದ ವಾರ ಅಸ್ಸಾಂ ತೆರಳಿದ್ದ ರಾಹುಲ್ ಸಂಜೆ ಆರ್ಎಸ್ಎಸ್ ಕಾರ್ಯಕರ್ತರೆಲ್ಲರೂ ಮನೆಗಳಿಗೆ ಹೋದ ನಂತರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರಂತೆ.