ರಾಷ್ಟ್ರೀಯ

ಒಆರ್ ಒಪಿ ಯೋಜನೆಯ ಏಕ ಸದಸ್ಯ ಸಮಿತಿ ವಿರೋಧಿಸಿ ಕೋರ್ಟ್ ಮೊರೆ ಹೋಗುತ್ತೇವೆ: ನಿವೃತ್ತ ಯೋಧರು

Pinterest LinkedIn Tumblr

OROPನವದೆಹಲಿ: ಒನ್ ರ್ಯಾಂಕ್ ಒನ್ ಪೆನ್ಷನ್(ಒಆರ್ ಒಪಿ) ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿರುವ ಏಕ ಸದಸ್ಯ ಸಮಿತಿಯನ್ನು ನಿವೃತ್ತ ಯೋಧರು ವಿರೋಧಿಸಿದ್ದು, ಸಮಿತಿ ರಚನೆಯ ವಿರುದ್ಧ ಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ.

ಯೋಜನೆಗೆ ಸಂಬಂಧಿಸಿದ ಕೆಲವು ಗೊಂದಲಗಳನ್ನು ಕೇಂದ್ರ ಸರ್ಕಾರವೇ ಬಗೆಹರಿಸಬಹುದು, ಆದರೆ ಇದಕ್ಕಾಗಿ ರಚಿಸಲಾಗಿರುವ ಪ್ರತ್ಯೇಕ ಸಮಿತಿಯನ್ನು ನಾವು ಒಪ್ಪುವುದಿಲ್ಲ, ಕೇಂದ್ರ ಸರ್ಕಾರದ ನಿರ್ಧಾರ ವಿರುದ್ಧ ನಾವು ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ ಎಂದು ಒಆರ್ ಒಪಿ ಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ನಿವೃತ್ತ ಯೋಧ ಕರ್ನಲ್ ಅನಿಲ್ ಕೌಲ್ ಎಚ್ಚರಿಸಿದ್ದಾರೆ.

“ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೆರವಾಗುವುದಕ್ಕೆ ಸಮಿತಿ ರಚಿಸುತ್ತೀರಿ, ಸಮಿತಿಯ ಕೆಲಸವನ್ನು ಸರ್ಕಾರವೇ ಮಾಡಬಹುದು” ಎಂದು ಕೌಲ್ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿರುವುದರ ಬಗ್ಗೆ ಶೀಘ್ರವೇ ಐಇಎಸ್ಎಂ ಆಡಳಿತ ಮಂಡಳಿ ಸಭೆ ಕರೆಯುವುದಾಗಿ ಕೌಲ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಒಆರ್ ಒಪಿ ಯೋಜನೆ ದೋಷಪೂರಿತವಾಗಿದೆ ಎಂದು ನಿವೃತ್ತ ಯೋಧರು ಆರೋಪಿಸಿದ್ದಾರೆ. ದೋಷಗಳನ್ನು ಸರಿಪಡಿಸುವುದಕ್ಕಾಗಿ ಕೇಂದ್ರ ಸರ್ಕಾರ ಸೆ.5 ರಂದು ಏಕ ಸದಸ್ಯ ನ್ಯಾಯಾಂಗ ಸಮಿತಿಯನ್ನು ರಚನೆ ಮಾಡಿತ್ತು. ಏಕ ಸದಸ್ಯ ಸಮಿತಿ ಬದಲು ಕನಿಷ್ಠ ತ್ರಿಸದಸ್ಯ  ಸಮಿತಿಯನ್ನು ರಚಿಸಬೇಕು ಎಂದು ನಿವೃತ್ತ ಯೋಧರು ಪಟ್ಟು ಹಿಡಿದಿದ್ದಾರೆ.

Write A Comment