ಮಂಡ್ಯ: ಆರ್ ಟಿಒ ಇಲಾಖೆಯ ಅಧಿಕಾರಿಯೊಬ್ಬರು ಅಕ್ರಮವಾಗಿ ಚಾಲನಾ ಪರವಾನಗಿ ನೀಡುತ್ತಿರುವುದನ್ನು ಪ್ರಶ್ನಿಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ನಾಯಕರ ಮೇಲೆ ಹಲ್ಲೆ ನಡೆದಿದೆ.
ಕರ್ನಾಟಕ ಆಮ್ ಆದ್ಮಿ ಪಕ್ಷದ ಫೇಸ್ ಬುಕ್ ಪೇಜ್ ನಲ್ಲಿ ಅಪ್ ಡೇಟ್ ಆಗಿರುವ ಮಾಹಿತಿ ಪ್ರಕಾರ, ಮಂಡ್ಯದ ಆರ್.ಟಿ.ಒ ಇನ್ಸ್ ಪೆಕ್ಟರ್ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ವಾಹನ ಚಾಲನಾ ಪರವಾನಗಿ ನೀಡುತ್ತಿರುವುದನ್ನು ವಿರೋಧಿಸಿದ ಆಮ್ ಆದ್ಮಿ ನಾಯಕರಾದ ರವಿಕೃಷ್ಣ ರೆಡ್ಡಿ ಹಾಗೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಮಂಡ್ಯದ ನಿಧಿ ಡ್ರೈವಿಂಗ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಡಬಲ್ ಕ್ಲಚ್ ಮತ್ತು ಬ್ರೇಕ್ ಹೊಂದಿರುವ ವಾಹನದಲ್ಲಿ ಡಿಎಲ್(ಚಾಲನಾ ಪರವಾನಗಿ) ಅರ್ಜಿದಾರನ ಚಾಲನಾ ಪರೀಕ್ಷೆ ನಡೆಸಿದ್ದು ಅಲ್ಲದೇ , ಡ್ರೈವಿಂಗ್ ತರಬೇತಿ ನೀಡುವವರು ಪಕ್ಕದಲ್ಲೇ ಕುಳಿತ್ತಿದ್ದರು. ಈ ಅಕ್ರಮ ತಿಳಿದಿದ್ದರೂ ಸಹ ಪರೀಕ್ಷೆಯನ್ನು ಅಂಗೀಕರಿಸಿದ ಆರ್ ಟಿ ಒ ಇನ್ಸ್ ಪೆಕ್ಟರ್ ಷಗುರಲ್ಲಾ ಶರೀಫ್ ಪರೀಕ್ಷೆಯನ್ನು ಅಂಗೀಕರಿಸಿ ಅಕ್ರಮವಾಗಿ ಲೈಸೆನ್ಸ್ ಮಂಜೂರು ಮಾಡಲು ಮುಂದಾಗಿದ್ದರು. ಈ ಬಗ್ಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರಶ್ನಿಸಿದಾಗ ಆರ್ ಟಿ ಒ ಇನ್ಸ್ ಪೆಕ್ಟರ್ ಶರೀಫ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ ಮಧ್ಯಪ್ರವೇಶಿಸಿದ ಡ್ರೈವಿಂಗ್ ಶಾಲೆಯ ಮಾಲಿಕ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲು ತನ್ನ ಸಿಬ್ಬಂದಿಗೆ ಸೂಚಿಸಿದ ಎಂದು ಆಪ್ ನಾಯಕರು ಆರೋಪಿಸಿದ್ದಾರೆ.