ಬೆಂಗಳೂರು, ಡಿ.15: ಹಿರಿಯ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಆಭರಣ ಅಂಗಡಿಯಲ್ಲಿ ಚಿನ್ನದ ಸರ ಕದ್ದಿದ್ದ ಪ್ರತಿಷ್ಠಿತ ಕಂಪೆನಿಗಳ ಉದ್ಯೋಗಿ ಸ್ನೇಹಿತರಿಬ್ಬರನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೇವಸಂದ್ರ ಮುಖ್ಯರಸ್ತೆ ವಾಸಿ ಕಿಶೋರ್ಕುಮಾರ್(24) ಮತ್ತು ಪಾಂಡವಪುರ ತಾಲ್ಲೂಕು ಬೀರಶೆಟ್ಟರಹಳ್ಳಿಯ ಕವಿತಾ(22) ಬಂಧಿತ ಸ್ನೇಹಿತರು. ಕಿಶೋರ್ ಸ್ಯಾಮ್ಸಂಗ್ ಕಂಪೆನಿಯಲ್ಲಿ ಎಚ್ಆರ್ ಆಗಿದ್ದರೆ, ಕವಿತಾ ಇನ್ಫೋಸಿಸ್ ಕಂಪೆನಿಯಲ್ಲಿ ಪ್ರೋಸಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ನೇಹಿತರಾದ ಇಬ್ಬರೂ ಸಾರಕ್ಕಿ ಮುಖ್ಯರಸ್ತೆಯಲ್ಲಿನ ವಿಮಲ್ ಜ್ಯೂಯಲರ್ಸ್್ ಅಂಗಡಿಗೆ ನಿನ್ನೆ ಮಧ್ಯಾಹ್ನ ಹಿರಿಯ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಹೋಗಿದ್ದಾರೆ.
ಆಭರಣ ಖರೀದಿಸುವ ನೆಪದಲ್ಲಿ ಸರಗಳನ್ನು ನೋಡಿದ್ದು, 40 ಸಾವಿರ ರೂ. ಬೆಲೆಯ 16 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಅಂಗಡಿ ಮಾಲೀಕ ಸುರೇಶ್ ಕುಮಾರ್ ಜೆ.ಪಿ.ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸ್ನೇಹಿತರಿಬ್ಬರನ್ನು ಬಂಧಿಸಿ ಸರ ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ ನಕಲಿ ಪೊಲೀಸ್ ಗುರುತಿನ ಚೀಟಿ, ಪೊಲೀಸ್ ಅಧಿಕಾರಿಯ ಸಮವಸ್ತ್ರಗಳಲ್ಲಿನ ಫೊಟೋಗಳಿದ್ದ ಕಿಶೋರ್ನ ಮೊಬೈಲ್, ಕವಿತಾಳ ಮೊಬೈಲನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಡಿಸಿಪಿ ಲೋಕೇಶ್ಕುಮಾರ್ ಅವರ ಮಾರ್ಗದರ್ಶನ, ಎಸಿಪಿ ಜಿ.ಎಂ.ಕಾಂತರಾಜ್ ಅವರ ನೇತೃತ್ವದಲ್ಲಿ ಜೆ.ಪಿ.ನಗರ ಠಾಣೆ ಇನ್ಸ್ಪೆಕ್ಟರ್ ಎಸ್.ಜೆ.ಮಹಾಜನ್, ಪಿಎಸ್ಐ ಜೆ.ಎಂ.ರೇಣುಕಾ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದೆ.