ಮಂಗಳೂರು,ಡಿ.16: ಸೂಕ್ತ ದಾಖಲೆಗಳಿಲ್ಲದೇ ನಗರದ ಉರ್ವಸ್ಟೋರ್ ಮಾರುಕಟ್ಟೆ ಸಮೀಪ ಕಾರ್ಯಚರಿಸುತ್ತಿದ್ದ 2 ಗೂಡಂಗಡಿಗಳನ್ನು ಬುಧವಾರ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ತೆರವುಗೊಳಿಸಲಾಗಿದೆ.
ಈ ಎರಡೂ ಅಂಗಡಿಗಳ ದಾಖಲೆಗಳನ್ನು ಮನಪಾ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅಂಗಡಿಗಳ ಮಾಲಿಕರು ಊರ್ಜಿತವಲ್ಲದ ಡೋರ್ ನಂಬರ್ ಬಳಸಿ ಮನಪಾದಿಂದ ಪರವಾನಿಗೆ ಪಡೆದು ಗುಜಿರಿ ಅಂಗಡಿ ಹಾಗೂ ಎಸ್ ಟಿ ಡಿ ಬೂತ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಅಂಗಡಿ ಮಾಲಿಕರಿಗೆ ಗೂಡಂಗಡಿಯನ್ನು ತೆರೆವುಗೊಳಿಸಬೇಕು ಎಂದು 2 ದಿನಗಳ ಮೊದಲೇ ಮಂಗಳೂರು ಮಹಾನಗರ ಪಾಲಿಕೆ ನೋಟಿಸ್ ಜಾರಿಗೊಳಿಸಿದೆ ಎಂದು ಹೇಳಲಾಗಿದೆ.
ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ ಪ್ರವೀಣ್ ಅವರ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಯಿತು.ಈ ವೇಳೆ ನಾಗರೀಕರ ವೇದಿಕೆಯ ಹನುಮಂತ್ ಕಾಮತ್ ಹಾಗೂ ಮತ್ತಿತ್ತರರು ಸ್ಥಳದಲ್ಲಿ ಉಪಸ್ಥಿತರಿದ್ದರು.