ಹೊಸದಿಲ್ಲಿ: 2012ರಲ್ಲಿ ದಿಲ್ಲಿಯಲ್ಲಿ ನಡೆದ ನರ್ಸಿಂಗ್ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (ನಿರ್ಭಯಾ ಪ್ರಕರಣ) ಪ್ರಮುಖ ದೋಷಿಯಾದ ಬಾಲಾಪರಾಧಿಯು ರವಿವಾರ ಬಿಡುಗಡೆ ಮಾಡಲಾಗಿದೆ. ಬಾಲಪರಾಧಿಗಳಿಗೆ ನೀಡುವ ಗರಿಷ್ಠ 3 ವರ್ಷ ಜೈಲು ಶಿಕ್ಷೆಯನ್ನು ಆತ ಪೂರೈಸಿರುವ ಹಿನ್ನೆಲೆಯಲ್ಲಿ ಬಿಡುಗಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ದಿಲ್ಲಿ ಸರ್ಕಾರದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಎನ್ ಜಿಓ ಬಾಲಾಪರಾಧಿಯನ್ನು ನೋಡಿಕೊಳ್ಳಲಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ನಿರ್ಭಯಾ ಪೋಷಕರ ಆಕ್ರೋಷ ;ಪ್ರತಿಭಟನೆ
ದೆಹಲಿಯ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ 3 ವರ್ಷ ಶಿಕ್ಷೆ ಪೂರ್ಣಗೊಳಿಸಿರುವ ಬಾಲಾಪರಾಧಿ ಬಿಡುಗಡೆಯನ್ನು ವಿರೋಧಿಸಿ ನಿರ್ಭಯಾ ಪೋಷಕರು ಭಾನುವಾರ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಾಲಾಪರಾಧಿ ಬಿಡುಗಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅತ್ಯಾಚಾರಕ್ಕೊಳಗಾದ ಯುವತಿಯ ಪೋಷಕರು ಮಾಧ್ಯಮಗಳ ಮುಂದೆ ತಮ್ಮ ನೋವು ಹೇಳಿಕೊಂಡಿದ್ದು, ಜನಪ್ರತಿನಿಧಿಗಳ ಮಗಳ ಮೇಲೆ ಅತ್ಯಾಚಾರವಾಗಿದ್ದರೆ ತೀರ್ಪು ಬೇರೆಯದ್ದೇ ಆಗುತ್ತಿತ್ತು. ಕಳೆದ ಮೂರು ವರ್ಷಗಳಿಂದಲೂ ನಾವು ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಾ ಸೋತು ಹೋಗಿದ್ದೇವೆ.ಆದರೆ ನಮ್ಮ ಪ್ರತಿಭಟನೆಗೆ ನ್ಯಾಯ ಸಿಗಲಿಲ್ಲ ಎಂದಿದ್ದಾರೆ.
ಮೋದಿ ವಿರುದ್ಧ ಕಿಡಿ
ನೋವಿನಲ್ಲಿ ಪ್ರಧಾನಮಂತ್ರಿ ಮೋದಿ ವಿರುದ್ಧ ವೂ ಆಕ್ರೋಶ ವ್ಯಕ್ತ ಪಡಿಸಿರುವ ಅವರು , ವಿದೇಶಕ್ಕೆ ಹೋಗಿ ಯೋಗ ಕಲಿಸುವ ಮೋದಿಗೆ ನಮ್ಮ ದೇಶದಲ್ಲಿ ಏನಾಗುತ್ತಿದೆ ಎಂದು ತಿಳಿದಿಲ್ಲವೆ? ಎಲ್ಲಾ ಮೋದಿಯವರು ಭರವಸೆ ನೀಡಿದ್ದಾರೆಯೇ ಹೊರತು ಯಾವುದನ್ನೂ ಈಡೇರಿಸಿಲ್ಲ. ನಮಗಾಗಿರುವ ಅನ್ಯಾಯಕ್ಕೆ ಹೊಣೆ ಯಾರು ಎಂದು ಪ್ರಧಾನಿ ಗಳನ್ನು ಪ್ರಶ್ನಿಸಿದ್ದಾರೆ.
ಬಾಲಾಪರಾಧಿ ಬಿಡುಗಡೆ ಎನ್ನುವುದು ಜೀವನ ವೀಡಿ ನಮ್ಮ ದುಃಖಕ್ಕೆ ಕಾರಣ .ಇಷ್ಟಕ್ಕೆ ನಾವು ಸುಮ್ಮನಾಗುವುದಿಲ್ಲ ಆಂದೋಲನ ನಡೆಸುತ್ತೇವೆ ಎಂದು ನಿರ್ಭಯಾ ತಾಯಿ ಕಣ್ಣೀರು ಸುರಿಸಿದ್ದಾರೆ.
ಬಾಲಾಪರಾಧಿಯನ್ನು ಬಿಡುಗಡೆ ಮಾಡದಂತೆ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಮತ್ತು ಕೇಂದ್ರ ಸರಕಾರ ಮಾಡಿದ್ದ ಮನವಿಯನ್ನು ದಿಲ್ಲಿ ಹೈಕೋರ್ಟ್ ಶುಕ್ರವಾರ ವಷ್ಟೇ ತಿರಸ್ಕರಿಸಿತ್ತು. ಹೀಗಾಗಿ ನಿರ್ಭಯ ಪ್ರಕರಣದಲ್ಲಿ ಅತ್ಯಂತ ಕ್ರೂರವಾಗಿ ವರ್ತಿಸಿದ್ದ ಬಾಲಾಪರಾಧಿ ಬಿಡುಗಡೆಗೆ ಎದುರಿದ್ದ ಅಡ್ಡಿಗಳು ನಿವಾರಣೆಯಾಗಿದ್ದವು.
ಮಹಿಳಾ ಆಯೋಗದ ಯತ್ನ ವಿಫಲ
ಬಾಲಾಪರಾಧಿ ಬಿಡುಗಡೆಗೆ ಆದೇಶಕ್ಕೆ ತಡೆ ಕೋರಿ ಶನಿವಾರ ರಾತ್ರಿ ಮಹಿಳಾ ಆಯೋಗ ನಡೆಸಿದ ಯತ್ನ ವಿಫಲವಾಗಿದ್ದು, ಮಧ್ಯರಾತ್ರಿ ಸಲ್ಲಿಸಿದ್ದ ಅರ್ಜಿಯನ್ನು ಶೀಘ್ರ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿತ್ತು.ಇದರಿಂದಾಗಿ ಬಾಲಾಪರಾಧಿಯ ಬಿಡುಗಡೆಯ ಹಾದಿ ಸುಗಮವಾಗಿತ್ತು.
ಕಣ್ಗಾವಲು: ಬಿಡುಗಡೆ ಬಳಿಕವೂ ಬಾಲಾಪರಾಧಿ ಮೇಲೆ, ಬಾಲಾಪರಾಧ ನ್ಯಾಯ ಮಂಡಳಿ ಕಣ್ಗಾವಲು ಇಡಲಿದೆ. ಆತನ ಪುನರ್ವಸತಿ, ಆತ ಸಮಾಜದ ಮುಖ್ಯ ವಾಹಿನಿಗೆ ಮರಳುವ ,ಆತ ತನ್ನ ಕುಟುಂಬವನ್ನು ಪುನಃ ಸೇರಿಕೊಳ್ಳಬಹುದೇ ಎಂಬುದರ ಬಗ್ಗೆ ಮಂಡಳಿಯೇ ನಿರ್ಧಾರ ಕೈಗೊಳ್ಳಲಿದೆ.
ನಿರ್ಭಯಾ ಪೋಷಕರು ವಶಕ್ಕೆ: ಈ ನಡುವೆ, ದಿಲ್ಲಿಯಲ್ಲಿ ಬಾಲಾಪರಾಧಿ ಬಿಡುಗಡೆ ವಿರುದ್ಧ ಪ್ರತಿಭಟನೆ ನಡೆಸಿದ ನಿರ್ಭಯಾ ಪಾಲಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರಕರಣ ಹಿನ್ನೆಲೆ: 2012ರ ಡಿ.16ರಂದು ಚಲಿಸುತ್ತಿದ್ದ ಬಸ್ನಲ್ಲಿ “ನಿರ್ಭಯಾ’ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರವೆಸಗಿ, ಹಲ್ಲೆ ನಡೆಸಿದ್ದರು. ಈ ಪೈಕಿ ಅತಿ ಹೆಚ್ಚು ಕ್ರೂರತೆ ಮೆರೆದವನು ಈ ಬಾಲರಾಕ್ಷಸ. ಘಟನೆ ನಡೆದಾಗ ಈತನಿಗಿನ್ನೂ 18 ವರ್ಷ ತುಂಬಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನನ್ನು ಬಾಲಾಪರಾಧ ನ್ಯಾಯ ಕಾಯ್ದೆಯಡಿ ವಿಚಾರಣೆ ನಡೆಸಲಾಗಿತ್ತು. ಆ ಕಾಯ್ದೆಯಡಿ ಗರಿಷ್ಠ ಮೂರು ವರ್ಷವಷ್ಟೇ ಶಿಕ್ಷೆ ವಿಧಿಸಲು ಅವಕಾಶವಿದ್ದದ್ದರಿಂದ ಈತ ಘೋರ ಶಿಕ್ಷೆಯಿಂದ ಪಾರಾಗಿದ್ದ. ಉಳಿಕೆ ನಾಲ್ಕು ಮಂದಿಗೆ ಗಲ್ಲು ಶಿಕ್ಷೆಯಾಗಿತ್ತು. ಮತ್ತೂಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ.
ವಾಪಸಾತಿಗೆ ಗ್ರಾಮಸ್ಥರಿಂದಲೇ ವಿರೋಧ
ಬದಾಯೂಂ (ಉತ್ತರ ಪ್ರದೇಶ): ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿಯು ರವಿವಾರ ಬಿಡುಗಡೆಯಾಗಿ ತನ್ನ ಸ್ವಗ್ರಾಮಕ್ಕೆ ಹಿಂದಿರುಗುವ ನಿರೀಕ್ಷೆಯಿದೆ. ಆದರೆ ಆತ ಗ್ರಾಮ ಪ್ರವೇಶಿಸುವ ಕುರಿತು ಗ್ರಾಮಸ್ಥರಲ್ಲೇ ಪರ ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಬಾಲಕನು ಕೊಲೆ ಮತ್ತು ಅತ್ಯಾಚಾರದಂಥ ಕೃತ್ಯ ಎಸಗಿ ನಮ್ಮ ಗ್ರಾಮದ ಹೆಸರಿಗೆ ಮಸಿ ಬಳಿದ ಕಾರಣ ಆತನಿಗೆ ಗ್ರಾಮ ಪ್ರವೇಶಿಸಲು ಅನುವು ಮಾಡಬಾರದು ಎಂದು ಗ್ರಾಮಸ್ಥರ ಒಂದು ಗುಂಪು ಆಗ್ರಹಿಸಿದೆ. ಆದರೆ ಬಾಲಾ ಪರಾಧಿ ತಾಯಿಯು, ತನ್ನ ಮನೆಗೆ ಆರ್ಥಿಕ ನೆರವಿನ ಆವಶ್ಯಕತೆ ಬಹಳ ಇದೆ, ಮಗ ಮನೆಗೆ ಬಂದು ತಮಗೆ ಆಸರೆಯಾಗಲು ಆತನಿಗೆ ಗ್ರಾಮದೊಳಗೆ ಪ್ರವೇಶ ನೀಡಬೇಕು ಎಂದು ಹೇಳಿದ್ದಾರೆ. ತಾಯಿಯ ಮನವಿಗೆ ಬೆಂಬಲ ಸೂಚಿಸಿರುವ ಹಲವಾರು ಗ್ರಾಮಸ್ಥರು ಅಪರಾಧಿಗೆ ಹೊಸ ಜೀವನ ಆರಂಭಿಸಲು ಅವಕಾಶ ನೀಡಬೇ ಕೆಂದು ಹೇಳಿದ್ದಾರೆ. ಬಾಲಾಪ ರಾಧಿಗೆ ಬಿಡುಗಡೆ ಅನಂತರ, ಜೀವನೋಪಾಯಕ್ಕಾಗಿ 1 ಹೊಲಿಗೆ ಯಂತ್ರ ಮತ್ತು 10 ಸಾವಿರ ರೂ. ನೀಡಲು ದಿಲ್ಲಿ ಸರಕಾರ ಮುಂದಾಗಿದೆ.
-ಉದಯವಾಣಿ