ರಿಯಾದ್: ಸೌದಿ ಅರೇಬಿಯಾದ ನೈಋತ್ಯದಲ್ಲಿರುವ ನಜರನ್ ನಗರದ ಮೇಲೆ ಯೆಮೆನ್ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಮೂರು ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾದಿದೆ.
ಮೃತ ಭಾರತೀಯರು ತಮಿಳುನಾಡು ಮೂಲದವರು ಎಂದು ಜೆಡ್ಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ಉದ್ಯೋಗ ಅರಸಿಕೊಂಡು ಹೋದ ಭಾರತೀಯ ಮೂಲದವರು ಹೆಚ್ಚಾಗಿ ಜಿಝಾನ್ ಮತ್ತು ನಜರನ್ ನಗರಗಳಲ್ಲಿ ನೆಲೆಸಿದ್ದಾರೆ. ಈ ನಗರಗಳು ಆಂತರಿಕ ಯುದ್ಧ ಪೀಡಿತ ಯೆಮೆನ್ ರಾಷ್ಟ್ರದ ಗಡಿಗೆ ಹೊಂದಿಕೊಂಡಂತಿವೆ. ಇದರಿಂದಾಗಿ ಈ ನಗರಗಳು ಬಂಡುಕೋರರರಿಗೆ ಸುಲಭದ ಗುರಿಯಾಗಿವೆ.
ಯೆಮೆನ್ನಲ್ಲಿ ಕಾರ್ಯಾಚರಿಸುತ್ತಿರುವ ಇರಾನ್ ಬೆಂಬಲಿತ ಯೆಮೆನ್ ಬಂಡುಕೋರರನ್ನು ಮಟ್ಟ ಹಾಕಲು ಸೌದಿ ಅರೇಬಿಯಾ ನೇತೃತ್ವದ 34 ಮುಸ್ಲಿಂ ರಾಷ್ಟ್ರಗಳ ಒಕ್ಕೂಟ ಮುಂದಾಗಿರುವ ಹಿನ್ನೆಲೆಯಲ್ಲಿ ಬಂಡುಕೋರರು ಈ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.