ಮಂಗಳೂರು, ಡಿ.21: ಇತ್ತೀಚೆಗೆ ನಟ ಶಾರುಖ್ ಖಾನ್ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಶಾರುಕ್ ಖಾನ್ ಅಭಿನಯದ ದಿಲ್ವಾಲೆ ಹಿಂದಿ ಚಿತ್ರ ಪ್ರದರ್ಶನಕ್ಕೆ ಬಜರಂಗದಳದ ಕಾರ್ಯಕರ್ತರು ಮಂಗಳೂರಿನಲ್ಲಿ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ ಘಟನೆ ರವಿವಾರ ನಡೆಯಿತು. ಈ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಯಿತು.
ಚಿತ್ರ ಪ್ರದರ್ಶನಗೊಳ್ಳುತ್ತಿರುವ ಬಿಜೈನ ಭಾರತ್ ಮಾಲ್ನ ಬಿಗ್ ಸಿನೆಮಾಸ್ ಎದುರು ಪ್ರತಿಭಟನೆ ನಡೆಸಿದ ಬಜರಂಗದಳದ ಕಾರ್ಯಕರ್ತರು ಚಿತ್ರ ಪ್ರದರ್ಶಿಸದಂತೆ ಆಗ್ರಹಿಸಿದರು. ಚಿತ್ರಮಂದಿರದ ವ್ಯವಸ್ಥಾಪಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಸಿನೆಮಾ ಪ್ರದರ್ಶನ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಉರ್ವ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಪಿವಿಆರ್, ಸಿನಿಪೋಲಿಸ್ನಲ್ಲೂ ಚಿತ್ರ ಪ್ರದರ್ಶನಕ್ಕೆ ತಡೆ:
ಬಜರಂಗದಳದ ಕಾರ್ಯಕರ್ತರು ಫಿಝಾ ಫೋರಂ ಮಾಲ್ನ ಪಿವಿಆರ್, ಸಿಟಿ ಸೆಂಟರ್ನ ಸಿನಿಪೋಲಿಸ್ನಲ್ಲೂ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿ ರದ್ದುಗೊಳಿಸಿದ್ದಾರೆ. ಅಲ್ಲದೆ, ನಗರದ ಇತರ ಮಾಲ್ಗಳಿಗೂ ತೆರಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಚಿತ್ರ ಪ್ರದರ್ಶನ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ. ನಟರಾದ ಆಮಿರ್ ಖಾನ್ ಮತ್ತು ಶಾರುಕ್ ಖಾನ್ರ ಯಾವ ಚಿತ್ರ ಪ್ರದರ್ಶನಕ್ಕೂ ಅವಕಾಶ ನೀಡುವುದಿಲ್ಲ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.