ಕುಂದಾಪುರ: ಉಡುಪಿ ಜಿಲ್ಲಾ ಪೊಲೀಸ್, ಕುಂದಾಪುರ ಪೊಲೀಸ್ ಉಪವಿಭಾಗ, ಕುಂದಾಪುರ ಪೊಲೀಸ್ ಠಾಣೆ ಹಾಗೂ ಕುಂದಾಪುರ ಲಾರಿ ಮಾಲಕರು ಮತ್ತು ಟ್ರಾನ್ಸ್ ಪೋರ್ಟ್ ಮಾಲಕರ ಸಂಘ (ರಿ) ಇವರ ಆಶ್ರಯದಲ್ಲಿ ಅಪರಧ ತಡೆ ಮಾಸಾಚರಣೆ ಕಾರ್ಯಕ್ರಮ ಕುಂದಾಪುರದ ಅಕ್ಷತಾ ಹಾಲ್ ನಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮಾತನಾಡಿ, ನಮ್ಮ ಮನೆಯ ಹಾಗೂ ಮನೆಯವರ ಸುರಕ್ಷತೆಯ ಬಗ್ಗೆಯೂ ಜನರು ಆಲೋಸಬೇಕಿದೆ. ಪೊಲೀಸರಿಂದಲೇ ಎಲ್ಲವೂ ಆಗಬೇಕಿಲ್ಲ, ಪೊಲೀಸರೊಂದಿಗೆ ನಾಗರೀಕರು ಕೈಜೋಡಿಸಿ ಮಾಹಿತಿ ವಿನಿಮಯ ಮಾಡಿಕೊಂಡು ಪೊಲೀಸರಿಗೆ ನೆರವಾದಾಗಲೇ ಅಪರಾಧ ಚಟುವಟಿಕೆಗಳ ನಿಯಂತ್ರಣ ಸಾಧ್ಯವಿದೆ.
ಲಾರಿಯ ಚಾಲಕ ಹಾಗೂ ನಿರ್ವಾಹಕರ ಬಗೆಗಿನ ಎಲ್ಲಾ ದಾಖಲಾತಿಗಳನ್ನು ಮಾಲೀಕರು ಇಟ್ಟುಕೊಂಡಿರಬೇಕು, ಎಷ್ಟೋ ಲಾರಿಗಳು ಕಳ್ಳತನವಾಗುತ್ತದೆ, ತಮ್ಮತಮ್ಮ ಸೊತ್ತುಗಳ ರಕ್ಷಣೆಯ ಜವಬ್ದಾರಿ ಎಲ್ಲರ ಮೇಲಿದೆ. ಮುಂದಿನ ದಿನಗಳಲ್ಲಿ ಪೊಲೀಸರು ಹಾಗೂ ವಾಹನ ಚಾಲಕರು ಮತ್ತು ಮಾಲಕರ ಒಂದು ಸಭೆ ನಡೆಸಿ ಚರ್ಚೆ ಮಾಡೋಣ ಎಂದರು.
ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಾಸೀರ್ ಹಾಗೂ ಸಂಚಾರಿ ಠಾಣೆಯ ದೇವೇಂದ್ರ ಅವರು ಕಾನೂನು ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಲಾರಿ ಮಾಲೀಕರ ಹಾಗೂ ಟ್ರಾನ್ಸ್-ಪೋರ್ಟ್ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಶ್ ಕಾವೇರಿ, ಕುಂದಾಪುರ ತಾಲೂಕು ಅಧ್ಯಕ್ಷ ಚಂದ್ರ ನಾಯ್ಕ್, ಉಪಾಧ್ಯಕ್ಷ ವಿಠ್ಠಲ್ ಬೈಂದೂರು, ಅಬುಬಕರ್, ಕಾರ್ಯದರ್ಶಿ ಅರುಣ್ ಕುಮಾರ ಶೆಟ್ಟಿ, ಜೊತೆ ಕಾರ್ಯದರ್ಶಿ ಅನಿಲ್ ಡಿ.ಎಸ್., ಮಾಜಿ ಅಧ್ಯಕ್ಷ ರವಿರಾಜ್ ವಂಡ್ಸೆ, ಆರುನ್ ಸಾಹೇಬ್ ಮೊದಲಾದವರಿದ್ದರು.