ಅಹ್ಮದಾಬಾದ್, ಡಿ.24-ತನ್ನ ವಿರುದ್ಧ ಅಮಾನತು ಕ್ರಮ ಕೈಗೊಂಡಿರುವುದರ ಕುರಿತಂತೆ ಸೂಕ್ತ ಕಾರಣ ತಿಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿರುವ ಡಿಡಿಸಿಎ ಪ್ರಕರಣದ ಹಿನ್ನೆಲೆಯಲ್ಲಿ ಪಕ್ಷದಿಂದ ಅಮಾನತುಗೊಂಡಿರುವ ಬಿಜೆಪಿ ಸಂಸದ ಕೀರ್ತಿ ಅಜಾದ್, ಈ ವಿವಾದದಲ್ಲಿ ಮಧ್ಯೆ ಪ್ರವೇಶಿಸುವಂತೆಯೂ ಮೋದಿ ಅವರನ್ನು ಆಗ್ರಹಿಸಿದ್ದಾರೆ.
ನಾನು ಹೋರಾಡುತ್ತಿರುವುದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ನಡೆದಿರುವ ಅಕ್ರಮ, ಅವ್ಯವಹಾರಗಳು, ಭ್ರಷ್ಟಾಚಾರದ ವಿರುದ್ಧವೇ ಹೊರತು, ಯಾವುದೇ ವ್ಯಕ್ತಿಯ ವಿರುದ್ಧ ಅಥವಾ ಬಿಜೆಪಿ ವಿರುದ್ಧ ಅಲ್ಲ ಎಂದು ಬಿಹಾರದ ದರ್ಭಾಂಗಾ ಕ್ಷೇತ್ರದ ಸಂಸದ ಕೀರ್ತಿ ಅಜಾದ್ ಹೇಳಿದ್ದಾರೆ.
ನನ್ನ ಮನವಿಯನ್ನು ಪ್ರಧಾನಿ ಮೋದಿ ಆಲಿಸುತ್ತಾರೆ ಮತ್ತು ಈ ವಿವಾದದಲ್ಲಿ ಮಧ್ಯೆ ಪ್ರವೇಶ ಮಾಡಿ ನನಗೆ ನ್ಯಾಯ ಒದಗಿಸುತ್ತಾರೆ ಮತ್ತು ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡುತ್ತಾರೆ ಎಂದು ನಾವು ವಿಶ್ವಾಸವನ್ನಿರಿಸಿಕೊಂಡಿದ್ದೇವೆ ಎಂದು ಅಜಾದ್ ಹೇಳಿದ್ದಾರೆ.