ಜೋಧ್ಪುರ್: ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರಿಗೆ ಬೆಂಬಲ ಸೂಚಿಸಿದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಇನ್ನೊಬ್ಬರನ್ನು ದೂರುವ ಮುನ್ನ ತಮ್ಮ ಪಕ್ಷದ ಬಗ್ಗೆಯೇ ತಿಳಿದುಕೊಳ್ಳಿ ಎಂದು ಕಾಂಗ್ರೆಸ್ ಪಕ್ಷದವರಿಗೆ ಹೇಳಿದ್ದಾರೆ.
ತಮ್ಮ ಮೇಲಿನ ವಿವಾದವನ್ನೆಲ್ಲಾ ಸುಳ್ಳು ಎಂಬುದನ್ನು ರಾಜೆ ತೋರಿಸಿಕೊಟ್ಟಿದ್ದಾರೆ. ಆಕೆ ಜಾನ್ಸಿಯ ರಾಣಿ ಎಂದು ಸ್ವಾಮಿ ಹೊಗಳಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕಾ ಪ್ರಹಾರ ಆರಂಭಿಸಿದ ಸ್ವಾಮಿ, 2001ರಲ್ಲಿ ಅಮೆರಿಕದಲ್ಲಿ 1.60 ಲಕ್ಷ ಅಮೆರಿಕನ್ ಡಾಲರ್ ಮತ್ತು ಮಾದಕ ವಸ್ತು ಕೈವಶವಿರಿಸಿಕೊಂಡಿದ್ದ ಆರೋಪದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಧಿಕಾರಿಗಳು ಬಂಧಿಸಿದ್ದರು ಎಂಬ ವಿಷಯವನ್ನು ಮತ್ತೊಮ್ಮೆ ಉಲ್ಲೇಖಿಸಿದ್ದಾರೆ.
ಆ ವೇಳೆ ಸೋನಿಯಾ ಗಾಂಧಿಯವರು ಆಗ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕರೆ ಮಾಡಿ ಸಹಾಯ ಬೇಡಿದ್ದರು. ಹಾಗೆ ವಾಜಪೇಯಿ ಅವರು ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್ಗೆ ಫೋನ್ ಮಾಡಿ ರಾಹುಲ್ನ್ನು ಬಿಡುಗಡೆಗೊಳಿಸಿದ್ದರು ಎಂಬ ಸ್ವಾಮಿಯವರ ಹೇಳಿಕೆಯನ್ನು ಹಿಂದಿ ದಿನಪತ್ರಿಕೆಯೊಂದು ವರದಿ ಮಾಡಿದೆ.
ಅದೇ ವೇಳೆ ರಾಜೆಯವರು ಎಲ್ಲ ಕಷ್ಟಗಳನ್ನು ಎದುರಿಸಲು ಛಾತಿಯುಳ್ಳವರು. ನಾನು ಆಕೆಗೆ ಸಹಾಯ ಮಾಡಲು ಬಯಸುತ್ತೇನೆ ಎಂದು ಸ್ವಾಮಿ ಹೇಳಿದ್ದಾರೆ.
ಆದಾಗ್ಯೂ, ಅಕ್ರಮ ವ್ಯವಹಾರದ ಆರೋಪ ಎದುರಿಸುತ್ತಿರುವ ರಾಜೇ ಅವರ ಪುತ್ರ ಜಲಾವರ್ ಸಂಸದ, ದುಷ್ಯಂತ್ ಸಿಂಗ್ ಬಗ್ಗೆ ನೀವೇನಂತೀರಿ? ಎಂದು ಕೇಳಿದಾಗ, ಈ ಆರೋಪವನ್ನು ಕಾಂಗ್ರೆಸ್ ಕಾನೂನು ರೀತಿಯಲ್ಲಿ ಸಾಬೀತು ಪಡಿಸಲಿ ಎಂದು ಸ್ವಾಮಿ ಹೇಳಿದ್ದಾರೆ.
ನಿಯಾಂತ್ ಹೆರಿಟೇಜ್ ಹೋಟೆಲ್ಸ್ ಪ್ರೈ. ಲಿಮಿಟೆಡ್ ನ ಮಾಲೀಕನಾಗಿರುವ ದುಷ್ಯಂತ್ ಸಿಂಗ್ ಅಕ್ರಮವಾಗಿ ರು. 11 ಕೋಟಿಯನ್ನು ತನ್ನ ಹೋಟೆಲ್ಗೆ ವರ್ಗಾಯಿಸಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಏತನ್ಮಧ್ಯೆ, ದುಷ್ಯಂತ್ ಸಿಂಗ್ ತಪ್ಪು ಮಾಡಿದ್ದರೆ, ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಿ ಆತ ತಪ್ಪಿತಸ್ಥ ಎಂದು ಸಾಬೀತು ಪಡಿಸಲಿ ಎಂದು ಸ್ವಾಮಿ ಹೇಳಿದ್ದಾರೆ.