ನವದೆಹಲಿ: 11 ವರ್ಷಗಳ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ನಂತರ ಕಾರ್ಗಿಲ್ ಯುದ್ಧ ಸಂಭವಿಸಿ ಅಪಾರ ಸಾವು ನೋವು ಸಂಭವಿಸಿತ್ತು. ಇಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಇದರ ಪರಿಣಾಮ ಮತ್ತೇನಾಗುತ್ತೋ? ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಟ್ವಿಟರ್ನಲ್ಲಿ ವ್ಯಂಗ್ಯವಾಡಿದ್ದಾರೆ.
ಆದರೆ ತಿವಾರಿ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರಿಗೆ ಭಾರತ ಪಾಕಿಸ್ತಾನ ದೇಶಗಳ ನಡುವೆ ಸೌಹಾರ್ದ ಬೇಕಿಲ್ಲ ಎಂದು ಕುಟುಕಿದ್ದಾರೆ.
ಪ್ರಧಾನಿ ನಡೆಯನ್ನು ಬಲವಾಗಿ ವಿರೋಧಿಸಿರುವ ಕಾಂಗ್ರೆಸ್ ಇದೊಂದು ಕೆಟ್ಟ ರಾಜತಾಂತ್ರಿಕ ಪ್ರದರ್ಶನ ಎಂದಿದೆ. ಪ್ರಧಾನಿ ನರೇಂದ್ರ ಮೋದಿ ಅಫ್ಘಾನಿಸ್ತಾನದಿಂದ ವಾಪಾಸಾಗುವ ವೇಳೆ ದಿಢೀರನೆ ಲಾಹೋರ್ನಲ್ಲಿ ಇಳಿದು ಪಾಕ್ ಪ್ರಧಾನಿ ನವಾಜ್ ಷರೀಫ್ರನ್ನು ಭೇಟಿ ಮಾಡಿ, ಷರೀಫ್ ಅವರಿಗೆ 66ನೇ ಜನ್ಮದಿನಕ್ಕೆ ಶುಭಾಶಯ ಕೋರಿದ್ದರು.