ಮೇಡಕ್: ಮೇಡಕ್ ಜಿಲ್ಲೆಯಲ್ಲಿ ತಮ್ಮ ತೋಟದ ಮನೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ನಡೆಸುತ್ತಿರುವ ‘ಆಯತ ಚಂಡಿ ಮಹಾ ಯಜ್ಞ’ದ ಪೆಂಡಾಲ್ ಒಂದರಲ್ಲಿ ಭಾನುವಾರ ಭಾರಿ ಅಗ್ನಿ ಅನಾಹುತ ಸಂಭವಿಸಿದೆ. ಬೆಂಕಿಯನ್ನು ಈಗ ನಿಯಂತ್ರಣಕ್ಕೆ ತರಲಾಗಿದ್ದು, ಸಂಪೂರ್ಣವಾಗಿ ಆರಿಸಲು ನಾಲ್ಕು ಅಗ್ನಿಶಾಮಕ ವಾಹನಗಳು ಶ್ರಮಿಸುತ್ತಿವೆ ಎಂದು ವರದಿಗಳು ತಿಳಿಸಿವೆ.
ಅಗ್ನಿ ಅನಾಹುತದಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ವರದಿಗಳು ಹೇಳಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಪೆಂಡಾಲ್ ಛಾವಣಿಯಲ್ಲಿ ಭಾರಿ ಬೆಂಕಿ ಕಾಣಿಸಿತು. ಬೆಂಕಿ ಕಂಡೊಡನೆಯೇ ಭಕ್ತರು ಭಯಗ್ರಸ್ತರಾದರು. ಸುರಕ್ಷಿತ ಸ್ಥಳಕ್ಕಾಗಿ ಯಾಗದ ಸ್ಥಳ ಬಿಟ್ಟು ಓಡಿದರು ಎಂದು ಹೇಳಲಾಗಿದೆ.
ಐದು ದಿನಗಳ ಈ ಮಹಾ ಯಜ್ಞದಲ್ಲಿ ಹಲವಾರು ಮಂದಿ ಪ್ರಮುಖರು, ಅತಿ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನಿಂದ ಸುಮಾರು 2000 ಮಂದಿ ಅರ್ಚಕರು ಯಾಗದಲ್ಲಿ ಪಾಲ್ಗೊಂಡಿದ್ದಾರೆ. ವಿಶ್ವಶಾಂತಿಗಾಗಿ ಯಾಗವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಹೇಳಿದ್ದಾರೆ. ಭಾನುವಾರ ಅಗ್ನಿ ಅನಾಹುತದ ಘಟನೆ ಸಂಭವಿಸುವುದಕ್ಕೆ ಮುನ್ನ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಯಾಗದಲ್ಲಿ ಪಾಲ್ಗೊಂಡಿದ್ದರು.