ಬೆಂಗಳೂರು: ತುಂಗಾ ನಾಲೆ ಆಧುನೀಕರಣದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ನೇತೃತ್ವದ ನಿಯೋಗ ಸೋಮವಾರ ಲೋಕಾಯುಕ್ತ ರಿಜಿಸ್ಟ್ರಾರ್ ಅವರಿಗೆ ದೂರು ಸಲ್ಲಿಸಲು ತೆರಳಿತ್ತು. ಆದರೆ ಸತತ ಮೂರು ಗಂಟೆಗಳಿಂದ ಈಶ್ವರಪ್ಪ ಅವರಿಂದ ದೂರು ಸ್ವೀಕರಿಸಲು ಲೋಕಾಯುಕ್ತ ರಿಜಿಸ್ಟ್ರಾರ್ ಬಾಲಕೃಷ್ಣ ಮೀನಾಮೇಷ ಎಣಿಸಿದ ಘಟನೆ ನಡೆದಿತ್ತು. ಕೊನೆಗೂ ಈಶ್ವರಪ್ಪ ನಿಯೋಗ ಸಲ್ಲಿಸಿದ ದೂರನ್ನು ಲೋಕಾಯುಕ್ತ ಸ್ವೀಕರಿಸಿದೆ.
ಸೋಮವಾರ 12ಗಂಟೆಗೆ ಈಶ್ವರಪ್ಪ ನೇತೃತ್ವದ ನಿಯೋಗ ಲೋಕಾಯುಕ್ತ ರಿಜಿಸ್ಟ್ರಾರ್ ಕಚೇರಿಗೆ ತೆರಳಿತ್ತು. ಆದರೆ ಲೋಕಾಯುಕ್ತ ರಿಜಿಸ್ಟ್ರಾರ್ ಅವರು ದೂರು ಸ್ವೀಕರಿಸುವಲ್ಲಿ ವಿಳಂಬ ಮಾಡಿದ್ದರಿಂದ ಬಿಜೆಪಿ ನಾಯಕರು ತಾಸುಗಟ್ಟಲೇ ಕಾಲ ಲೋಕಾ ಕಚೇರಿಯಲ್ಲೇ ಇರುವಂತಾಗಿತ್ತು.
ಲೋಕಾ ರಿಜಿಸ್ಟ್ರಾರ್ ನೇರವಾಗಿ ದೂರು ಸ್ವೀಕರಿಸುವಂತಿಲ್ಲ:
ಲೋಕಾಯುಕ್ತ ಕಾಯ್ದೆ ಪ್ರಕಾರ ಲೋಕಾಯುಕ್ತ ರಿಜಿಸ್ಟ್ರಾರ್ ಅವರು ನೇರವಾಗಿ ದೂರನ್ನು ಸ್ವೀಕರಿಸುವಂತಿಲ್ಲ. ಅಲ್ಲದೇ ತುಂಗಾ ನಾಲೆ ದೂರಿಗೆ ಸಂಬಂಧಿಸಿದಂತೆ ಈಶ್ವರಪ್ಪ ಅವರ ಬಳಿ ಸೂಕ್ತ ದಾಖಲೆಯೂ ಇರಲಿಲ್ಲವಾಗಿತ್ತು. ಈ ಹಿನ್ನೆಲೆಯಲ್ಲಿ ರಿಜಿಸ್ಟ್ರಾರ್ ಅವರು ಕಾನೂನು ತಜ್ಞರ ಸಲಹೆಗೆ ಮೊರೆ ಹೋಗಿದ್ದಾರೆ. ಕೊನೆಗೆ ಲೋಕಾ ರಿಜಿಸ್ಟ್ರಾರ್ ಬದಲು, ಲೋಕಾಯುಕ್ತ ಈಶ್ವರಪ್ಪ ನಿಯೋಗ ದೂರು ದಾಖಲಿಸಿಕೊಂಡಿತ್ತು.
– ಉದಯವಾಣಿ