ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕೇವಲ ಒಬ್ಬ ಮಾರ್ಕೆಟಿಂಗ್ ಮ್ಯಾನ್ ಆಗಿದ್ದು, ಅವರು ಮಾರ್ಕೆಟ್ ಮಾಡುವುದಕ್ಕಷ್ಟೇ ಸರಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸೋಮವಾರ ಹೇಳಿದ್ದಾರೆ.
ಇಂದು ನಗರದಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ವರದಿಗಾರರಿಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭಾರತವನ್ನು ಸದೃಢವಾಗಿ ಕಟ್ಟಿದ್ದು ಕಾಂಗ್ರೆಸ್ ನಾಯಕರು. ದೇಶದ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್. ಮೋದಿ ಕೇವಲ ಒಬ್ಬ ಮಾರ್ಕೆಟ್ ಮ್ಯಾನ್ ಅಷ್ಟೇ ಎಂದರು.
ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಗೆ ಬೇರೆ ಕೆಲಸವಿಲ್ಲ. ಇಂಥವರಿಗೆ ಬಿಜೆಪಿ ಕುಮ್ಮಕ್ಕು ನೀಡುತ್ತಿದೆ ಎಂದು ಪರಮೇಶ್ವರ ಆರೋಪಿಸಿದರು. ಅಲ್ಲದೆ ಇದಕ್ಕೆಲ್ಲಾ ಕಾಂಗ್ರೆಸ್ಸಿಗರು ಹೆದರುವುದಿಲ್ಲ ಎಂದರು.
ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಬಿಜೆಪಿಯವರ ಭ್ರಮೆ ಅಷ್ಟೇ ಎಂದ ಗೃಹ ಸಚಿವರು, ಕಾಂಗ್ರೆಸ್ ಪಕ್ಷ ಸೂರ್ಯ, ಚಂದ್ರ ಇರೋವರೆಗೂ ಅಸ್ತಿತ್ವದಲ್ಲಿ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.