ಮುಂಬೈ: ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರೆಸಿರುವ ಎನ್ಡಿಎ ಮಿತ್ರ ಪಕ್ಷ ಶಿವಸೇನೆ, ಪಾಕಿಸ್ತಾನಕ್ಕೆ ಆಪ್ತರಾಗುವವರು ರಾಜಕೀಯದಲ್ಲಿ ಬಹಳ ದಿನ ಉಳಿಯುವುದಿಲ್ಲ. ಇದಕ್ಕೆ ಬಿಜೆಪಿ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ.ಆಡ್ವಾಣಿ ಅವರರೇ ಜೀವಂತ ಸಾಕ್ಷಿ ಎಂದಿದೆ.
ಲಕ್ಷಾಂತರ ಮುಗ್ಧ ಭಾರತೀಯರನ್ನು ಬಲಿಪಡೆದ ಪಾಕಿಸ್ತಾನದ ಮಣ್ಣು ‘ಶಾಪಗ್ರಸ್ಥ’ ಎಂದು ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ನೆರೆಯ ಪಾಕಿಸ್ತಾನದೊಂದಿಗೆ ಬಾಂದವ್ಯ ವೃದ್ಧಿಗೆ ಯತ್ನಿಸಿದ ಯಾವುದೇ ರಾಜಕೀಯ ನಾಯಕರು ರಾಜಕೀಯದಲ್ಲಿ ಬಹಳ ದಿನ ಉಳಿಯುವುದಿಲ್ಲ ಎಂಬ ಸಾಂಪ್ರದಾಯಿಕ ನಂಬಕೆ ಇದೆ. ಇದನ್ನು ನಾವು ನೆನಪಿಸಿಕೊಳ್ಳವ ಅಗತ್ಯ ಇದೆ. ಹಿಂದೆ ಎಲ್.ಕೆ. ಆಡ್ವಾಣಿ ಅವರು ಮಹಮ್ಮದ್ ಅಲಿ ಜಿನ್ನಾ ಸಮಾಧಿ ಮೇಲೆ ಅವರನ್ನು ಹೊಗಳಿದ್ದರು. ಬಳಿಕ ಅವರ ರಾಜಕೀಯ ಗ್ರಾಫ್ ಕುಸಿಯುತ್ತಾ ಬಂತು. ಈಗ ಅವರನ್ನು ಸಂಪೂರ್ಣ ಸೈಡ್ಲೈನ್ ಮಾಡಲಾಗಿದೆ ಎಂದು ಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.
ಇನ್ನು ಮಾಜಿ ಪ್ರಧಾನಿ ವಾಜಪೇಯಿ ಅವರು ಸಹ ಲಾಹೋರ್ಗೆ ಬಸ್ ಆರಂಭಿಸುವ ಮೂಲಕ ಉಭಯ ದೇಶಗಳ ನಡುವೆ ಸಂಬಂಧ ವೃದ್ಧಿಗೆ ಯತ್ನಿಸಿದರು. ಅದಾದ ಬಳಿಕ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲೇ ಇಲ್ಲ ಎಂದಿದೆ.