ಗೌರಿಬಿದನೂರು, ಡಿ.28- ಕಳೆದ ರಾತ್ರಿ ತಾಲ್ಲೂಕಿನ ಸಿಡಿಚಲಹಳ್ಳಿಯಲ್ಲಿ ಹುಲಿ ಕಾಣಿಸಿಕೊಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಮಧ್ಯರಾತ್ರಿ ಒಂದು ಗಂಟೆ ಸಮಯದಲ್ಲಿ ದನ-ಕರುಗಳು ಕಿರುಚಿಕೊಳ್ಳುತ್ತಿದ್ದುದ್ದನ್ನು ಆಲಿಸಿದ ಗ್ರಾಮಸ್ಥ ಗೋಪಾಲರೆಡ್ಡಿ ಎಂಬುವರು ಮನೆಯಿಂದ ಹೊರ ಬಂದು ನೋಡಿದಾಗ ಹುಲಿಯೊಂದು ಮೇಕೆಯನ್ನು ಕಚ್ಚಿಕೊಂಡು ಹೋಗುತ್ತಿರುವುದನ್ನು ಕಂಡಿದ್ದಾರೆ. ತಕ್ಷಣ ಅಕ್ಕ-ಪಕ್ಕದವರನ್ನು ಎಚ್ಚರಿಸಿ ಗ್ರಾಮಕ್ಕೆ ಹುಲಿ ನುಗ್ಗಿರುವುದನ್ನು ತಿಳಿಸಿದ್ದಾರೆ. ಇದೇ ವೇಳೆ ಬಾಲಯ್ಯ ಎಂಬುವರಿಗೆ ಸೇರಿದ ಒಂದು ಮೇಕೆಯನ್ನು ಹುಲಿ ತಿಂದು ಹಾಕಿರುವುದು ತಿಳಿಯುತ್ತಿದ್ದಂತೆ ಆತಂಕ ಶುರುವಾಗಿದೆ.
ತಕ್ಷಣ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಇಂದು ಬೆಳಗ್ಗೆ ಸಿಬ್ಬಂದಿಗಳೊಂದಿಗೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ಹಲವು ದಿನಗಳಿಂದ ವನ್ಯಪ್ರಾಣಿಗಳು ಗ್ರಾಮಕ್ಕೆ ದಾಳಿಯಿಟ್ಟು, ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಿವೆ. ಎಷ್ಟೋ ಬಾರಿ ನಾವು ಇದರ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಇದರ ನಡುವೆ ಗ್ರಾಮದ ಆಸುಪಾಸಿನಲ್ಲಿ ಹುಲಿ, ಚಿರತೆಗಳನ್ನು ಹಿಡಿಯಲು ಬೋನುಗಳನ್ನು ಸಹ ಇಡಲಾಗಿದೆ.
ಕರ್ನಾಟಕ