ಕುಂದಾಪುರ: ಫಲ್ಸರ್ ಬೈಕ್ ಹಾಗೂ ಟ್ಯಾಂಕರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕುಂಭಾಸಿ ಆನೆಗುಡ್ಡೆ ಮುಖಮಂಟಪದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ನಡೆದಿದೆ.
ಕೊರವಡಿ ನಿವಾಸಿಗಳಾದ ವಾಸು (55) ಹಾಗೂ ಸಂದೇಶ ಎನ್ನುವವರೇ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರರು.
ಘಟನೆ ವಿವರ: ಕೊರವಡಿಯಿಂದ ಬೈಕಿನಲ್ಲಿ ಆಗಮಿಸಿದ ಸಂದೇಶ್ ಅವರು ಡಿವೈಡರ್ ಸಮೀಪ ರಸ್ತೆ ದಾಟಲು ನಿಂತಿದ್ದ ವೇಳೆ ಕುಂದಾಪುರ ಮಾರ್ಗದಿಂದ ಉಡುಪಿಯತ್ತ ಅತೀ ವೇಗವಾಗಿ ಸಾಗುತ್ತಿದ್ದ ಟ್ಯಾಂಕರ್ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಇಬ್ಬರ ಕೈ ಹಾಗೂ ತಲೆ ಭಾಗಕ್ಕೆ ಪೆಟ್ಟಾಗಿದೆ. ಕೂಡಲೇ ಸ್ಥಳೀಯರು ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಹೆದ್ದಾರಿ ಗೊಂದಲ:
ಕಳೆದ ಒಂದು ವಾರಗಳಿಂದ ತೆಕ್ಕಟ್ಟೆ, ಕುಂಭಾಸಿ, ಬೀಜಾಡಿ ಹಾಗೂ ಕೋಟೇಶ್ವರ ಭಾಗದಲ್ಲಿ ಹೆದ್ದಾರಿ ಕಾಮಗಾರಿ ನೆಪವೊಡ್ಡಿ ಮಾರ್ಗ ಬದಲಾವಣೆ ಮಾಡುತ್ತಿದ್ದು, ಕ್ಷಣ-ಕ್ಷಣಕ್ಕೆ ಮಾರ್ಗಗಳು ಬದಲಾವಣೆಯಾಗುತ್ತಿರುವುದು ವಾಹನ ಸವಾರರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ, ಅಲ್ಲದೇ ಡಿವೈಡರ್ ಗೊಂದಲದ ಪರಿಣಾಮ ಹಾಗೂ ರಸ್ತೆಯ ಬದಲಾವಣೆ ಪರಿಣಾಮ ಅಪಘಾತಗಳು ಹೆಚ್ಚುತ್ತಿದೆ ಈ ಬಗ್ಗೆ ಸಂಬಂದಪಟ್ಟ ಗುತ್ತಿಗೆ ಕಂಪೆನಿ ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದೆ.
ಸಾರ್ವಜನಿಕರ ಆಕ್ರೋಷ:
ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಬಳಿಕ ಒಂದು ಮಾರ್ಗದಲ್ಲಿ ಸಂಚಾರ ಅಸಾಧ್ಯವಾದ ಕಾರಣ ಪರ್ಯಾಯ ಮಾರ್ಗಕ್ಕೆ ಅಡ್ಡವಿಟ್ಟ ಬ್ಯಾರಿಗೇಟರುಗಳನ್ನು ಸಾರ್ವಜನಿಕರು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ನವಯುಗ ಗುತ್ತಿಗೆ ಕಂಪೆನಿಯ ನೌಕರನಿಗೆ ಸಾರ್ವಜನಿಕರು ಸಮಸ್ಯೆ ಬಗ್ಗೆ ತಿಳಿಸಿ ತಮ್ಮ ಅಕ್ರೋಷವನ್ನು ವ್ಯಕ್ತಪಡಿಸಿದರು.
ಕೂಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.