ಕುಂದಾಪುರ: ಪತ್ನಿಯ ಶೀಲವನ್ನು ಶಂಕಿಸಿ, ಆಕೆಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ ಕಾರಣಕ್ಕಾಗಿ ಆಕೆಯು ತನ್ನ ಎರಡೂವರೆ ವರ್ಷದ ಮಗಳೊಂದಿಗೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಆರೋಪಿ ಖುಲಾಸೆಗೊಂಡಿದ್ದಾರೆ.
ಮಹೇಶ ದೇವಾಡಿಗ ಎನ್ನುವವರೇ ಖುಲಾಸೆಗೊಂಡ ಆರೋಪಿ.
ಮಹೇಶ್ ಹಾಗೂ ತಗ್ಗರ್ಸೆಯ ನಾಗರತ್ನಾ ಉಪ್ಪುಂದದ ದುರ್ಗಾಪರಮೇಶ್ವರಿ ಸಭಾ ಮಂದಿರದಲ್ಲಿ ೨೦೧೧ರ ಜ. ೩೦ರಂದು ಮದುವೆಯಾಗಿದ್ದರು. ನಾಗರತ್ನಾ ಅವರಿಗೆ ವ್ಯಕ್ತಿಯೋರ್ವರಿಂದ ಬಂದ ಮಿಸ್ ಕಾಲ್ನಿಂದ ಸಮಸ್ಯೆ ಪ್ರಾರಂಭವಾಗಿ ಮಹೇಶ ದೇವಾಡಿಗ ಪತ್ನಿಯ ಶೀಲವನ್ನು ಶಂಕಿಸಲು ಪ್ರಾರಂಭಿಸಿದ್ದರು ಎನ್ನಲಾಗಿತ್ತು. ಆತ ಕುಡಿದು ಬಂದು ಹೆಂಡತಿಗೆ ಹೊಡೆದು ನೀನು ಹೊಳೆಗೆ ಬಿದ್ದು ಸಾಯಿ ಅಥವಾ ನನಗೆ ವಿಚ್ಛೇದನ ಕೊಡು ಎಂದು ಒತ್ತಾಯಿಸುತ್ತಿದ್ದರು ಎಂದು ಹೇಳಲಾಗಿದೆ. ಅಲ್ಲದೇ ಮಹೇಶ್ಗೆ ಹೆಣ್ಣು ಮಗು ಜನಿಸಿದ ಬಗ್ಗೆ ತೀವ್ರ ಬೇಸರವಿತ್ತು.
2014ರ ಜೂನ್ 28ರಂದು ಸಂಜೆ 6 ಗಂಟೆಗೆ ನಾಗರತ್ನಾ ಮಗಳು ಎರಡೂವರೆ ವರ್ಷದ (30 ತಿಂಗಳು) ತೃಶಾಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಬೈಂದೂರಿನ ವೃತ್ತ ನಿರೀಕ್ಷ ಸುದರ್ಶನ ಮಹೇಶ್ ವಿರುದ್ಧ ಚಾರ್ಜ್ಶೀಟ್ನ್ನು ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ 13 ಜನ ಸಾಕ್ಷಿದಾರರ ವಿಚಾರಣೆಯಾಗಿತ್ತು, ಪ್ರಕರಣದ ವಿಚಾರಣೆ ಮಾಡಿದ ಕುಂದಾಪುರದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ಆರೋಪಿಯ ವಿರುದ್ಧ ಮಾಡಿದ ಆರೋಪ ರುಜುವತ್ತಾಗಿಲ್ಲವೆಂದು ಬಿಡುಗಡೆ ಮಾಡಿದ್ದಾರೆ.
ಆರೋಪಿ ಮಹೇಶ ದೇವಾಡಿಗರ ಪರವಾಗಿ ಕುಂದಾಪುರ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.