ನವದೆಹಲಿ: ಉಳ್ಳವರಿಗೆ ಅಡುಗೆ ಅನಿಲ ಸಬ್ಸಿಡಿ ಇಲ್ಲ ಎಂದು ಸರ್ಕಾರ ತೀರ್ಮಾನ ಮಾಡಿದ ಬೆನ್ನಲ್ಲೇ ಸಂಸತ್ತಿನ ಕ್ಯಾಟೀನ್ನಲ್ಲಿ ಸಬ್ಸಿಡಿಯನ್ನು ಹಿಂತೆಗೆದುಕೊಳ್ಳಲಾಗಿದ್ದು, ಸಂಸದರು ಆಹಾರ ತಿನಿಸುಗಳಿಗೆ ಹೆಚ್ಚಿನ ಹಣ ತೆರಬೇಕಾಗಿದೆ.
ಸಂಸತ್ತಿನ ಕ್ಯಾಂಟೀನ್ಗೆ ನೀಡುವ ಸಬ್ಸಿಡಿಯನ್ನು ರದ್ದು ಮಾಡುವ ಪ್ರಸ್ತಾಪಕ್ಕೆ ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ಅನುಮೋದನೆ ನೀಡಿದ್ದಾರೆ.
ಸಂಸತ್ತಿನ ಕ್ಯಾಂಟೀನ್ನಲ್ಲಿ ಸಂಸದರಿಗೆ ಅತಿ ಕಡಿಮೆ ಬೆಲೆಯಲ್ಲಿ ಆಹಾರ ತಿನಿಸುಗಳನ್ನು ನೀಡುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಬ್ಸಿಡಿ ರದ್ದು ಮಾಡುವ ತೀರ್ಮಾನ ಮಾಡಲಾಗಿದೆ. ಸಂಸತ್ತಿನ ಕ್ಯಾಂಟೀನ್ನಲ್ಲಿ ದಾಲ್ 2 ರೂ. ರೂಪಾಯಿಗಳಿಗೆ, ಕೋಳಿ ಸಾರು ಸೇರಿದಂತೆ ಆಹಾರ ತಿನಿಸುಗಳನ್ನು ಅತಿ ಕಡಿಮೆ ಬೆಲೆಗೆ ನೀಡಲಾಗಿತ್ತು. ಈಗ ಬೆಲೆಗಳನ್ನು ಶೇಕಡ 50 ರಿಂದ 70 ರಷ್ಟು ಏರಿಕೆ ಮಾಡಲಾಗಿದೆ ಎಂದು ಸಂಸತ್ತಿನ ಆಹಾರ ಸಮಿತಿ ಅಧ್ಯಕ್ಷ ಜಿತೀಂದ್ರ ರೆಡ್ಡಿ ಹೇಳಿದರು.
ಸಂಸತ್ತಿನ ಕ್ಯಾಂಟೀನ್ನಲ್ಲಿ ಕೆಲ ಆಹಾರ ಪದಾರ್ಥಗಳ ಬೆಲೆ ಮಾತ್ರ ಏರಿಕೆ ಮಾಡಿ ಎಂದು ಸಮಿತಿ ಶಿಫಾರಸ್ಸು ಮಾಡಿತ್ತಾದರೂ ಲೋಕಸಭಾಧ್ಯಕ್ಷ ಸುಮಿತ್ರ ಮಹಾಜನ್ ಇದಕ್ಕೆ ಒಪ್ಪದೆ ಎಲ್ಲಾ ಆಹಾರ ಪದಾರ್ಥಗಳ ಬೆಲೆಗಳನ್ನು ಪರಿಷ್ಕರಿಸುವ ತೀರ್ಮಾನ ಮಾಡಿದ್ದಾರೆ.