ಬೆಂಗಳೂರು,ಜ.02: ಹೊಸ ವರ್ಷದ ಆರಂಭದಲ್ಲೇ ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು ಲೀಟರ್ಗೆ 4 ರೂ. ಏರಿಸಿ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಹಾಲಿನ ದರ ಏರಿಕೆಯಾಗಿದ್ದು , ಜ.5ರಿಂದ ಈ ಹೊಸ ದರ ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ.
ಹಾಲಿನ ದರವನ್ನು ಪ್ರತಿ ಲೀಟರ್ಗೆ 5 ರೂ. ಹೆಚ್ಚಳ ಮಾಡುವಂತೆ ಕರ್ನಾಟಕ ಹಾಲು ಮಹಾಮಂಡಳಿಯ ಬೇಡಿಕೆ ಹಿನ್ನೆಲೆಯಲ್ಲಿ 4 ರೂ. ಏರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ. ಈ 4 ರೂ.ನಲ್ಲಿ ಒಕ್ಕೂಟಗಳ ಆಡಳಿತಾತ್ಮಕ ವೆಚ್ಚ ಕಳೆದು ಉಳಿದ ಹಣವನ್ನು ಹಾಲು ಉತ್ಪಾದಕರಿಗೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.
ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಮತ್ತು ಪಶುಸಂಗೋಪನೆ ಸಚಿವ ಎ.ಮಂಜು ಅವರು ಹಾಲು ದರ ಏರಿಕೆ ಕುರಿತ ಕೆಎಂಎಫ್ ಪ್ರಸ್ತಾವನೆ ಬಗ್ಗೆ ಮುಖ್ಯಮಂತ್ರಿಯವರ ಬಳಿ ಚರ್ಚಿಸಿದ ಸಂದರ್ಭದಲ್ಲಿ 4 ರೂ. ಏರಿಕೆಗೆ ಒಪ್ಪಿಗೆ ನೀಡಲಾಗಿದೆ. ಈ ಬಗ್ಗೆ ಕೆಎಂಎಫ್ನಿಂದ ಅಧಿಕೃತ ಪ್ರಕಟಣೆಯಷ್ಟೇ ಬಾಕಿಯಿದೆ ಎಂದು ಹೇಳಲಾಗಿದೆ. ಪ್ರಸ್ತುತ ಹಾಲಿನ ದರ 29 ರೂ. ಇದ್ದು ನಾಲ್ಕು ರೂ. ಹೆಚ್ಚಳ ಮಾಡಿದರೆ 33 ರೂ. ಆಗಲಿದೆ.
ಹಾಲು ದರ ಲೀಟರ್ಗೆ 5 ರೂ. ಹೆಚ್ಚಾದರೂ ಬೆಲೆ 34 ರೂ. ಆಗಲಿದ್ದು, ಇಡೀ ದೇಶದಲ್ಲಿ ಅಷ್ಟು ಕಡಿಮೆ ದರದಲ್ಲಿ ಹಾಲು ಎಲ್ಲಿಯೂ ಕೊಡುತ್ತಿಲ್ಲ ಎಂದು ಸಮರ್ಥಿಸಿಕೊಂಡರು. ಜತೆಗೆ ವೈಯಕ್ತಿಕವಾಗಿ ಹೇಳುವುದಾದರೆ ದರ ಹೆಚ್ಚಿಸಬೇಕು ಎಂಬುದು ತಮ್ಮ ಇಂಗಿತ ಎಂದೂ ಹೇಳಿದರು.