ಬೆಂಗಳೂರು: ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸದೆ ಹಾಗೆಯೇ ವಿಲೇವಾರಿ ಮಾಡುತ್ತಿದ್ದ ಹೋಟೆಲ್ಗಳು ಹಾಗೂ ಬೇಕರಿಯ ಮೇಲೆ ದಾಳಿ ನಡೆಸಿರುವ ಬಿಬಿಎಂಪಿ ದಕ್ಷಿಣ ವಲಯ ಆರೋಗ್ಯಾಧಿಕಾರಿಗಳು ಸುಮಾರು 1 ಲಕ್ಷದ 85 ಸಾವಿರ ದಂಡ ವಿಧಿಸಿದ್ದಾರೆ.
ಇಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ದಕ್ಷಿಣ ವಲಯ ಜಂಟಿ ಆಯುಕ್ತ ಹೇಮಚಂದ್ರ ನೇತೃತ್ವದಲ್ಲಿ ವಿವಿಧ ಹೋಟೆಲ್ಗಳ ಮೇಲೆ ದಾಳಿ ನಡೆಸಿದಾಗ ಕಸವನ್ನು ವಿಂಗಡಿಸದೆ ವಿಲೇವಾರಿ ಮಾಡುತ್ತಿದುದು ಪತ್ತೆಯಾಯಿತು.
ಹಸಿ ಕಸ ಮತ್ತು ಒಣ ಕಸಗಳನ್ನು ಒಂದೇ ಚೀಲದಲ್ಲಿಟ್ಟು ವಿಲೇವಾರಿ ಮಾಡುತ್ತಿದ್ದ ನಾಗಾರ್ಜುನ ಹೋಟೆಲ್ಗೆ 50 ಸಾವಿರ, ಉಪಾಹಾರ ಮಂದಿರ 25 ಸಾವಿರ, ಯುಗಾದಿ ಹೋಟೆಲ್ 25 ಸಾವಿರ, ಪವಿತ್ರಾ ಪ್ಯಾರಡೈಸ್ 25 ಸಾವಿರ, ನಂದಿನಿ ಹೋಟೆಲ್ಗೆ 25 ಸಾವಿರ ದಂಡವನ್ನು ವಿಧಿಸಲಾಗಿದೆ ಎಂದು ದಕ್ಷಿಣ ವಲಯ ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ಅವರು ಸಂಜೆವಾಣಿಗೆ ತಿಳಿಸಿದ್ದಾರೆ.
ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಹಾಟ್ ಚಿಪ್ಸ್ ಮತ್ತು ಇನ್ನೊಂದು ಬೇಕರಿಗೆ ತಲಾ 5 ಸಾವಿರ ರೂ.ಗಳನ್ನು ದಂಡವನ್ನು ವಿಧಿಸಲಾಗಿವೆ ಎಂದು ಅವರು ತಿಳಿಸಿದರು.
ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಈ ಹೋಟೆಲ್ ಮತ್ತು ಬೇಕರಿಗಳು ಕಸವನ್ನು ಬೇರ್ಪಡಿಸದೆ ಹಾಗೆಯೇ ವಿಲೇವಾರಿ ಮಾಡುತ್ತಿದ್ದುದರ ವಿರುದ್ಧ ಈ ದಂಡನೆ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.