ಕನಕಗಿರಿ(ಕೊಪ್ಪಳ): ಇಬ್ಬರು ಮಕ್ಕಳನ್ನು ಹೊಂದಿದ್ದ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನೊಬ್ಬ, 1.5 ಲಕ್ಷ ರೂ. ದಂಡ ಕಟ್ಟಿ, ಕೊನೆಗೆ ಅದೇ ಮಹಿಳೆಯನ್ನು ಮದುವೆಯಾಗಲು ಒಪ್ಪಿದ ಘಟನೆ ಹಿರೇಖೇಡದಲ್ಲಿ ನಡೆದಿದೆ.
ಕನಕಗಿರಿ ಸಮೀಪದ ಚಿಕ್ಕಖೇಡ ಗ್ರಾಮದ ವೀರೇಶ ಎಂಬ ಯುವಕ ಹಿರೇಖೇಡ ಗ್ರಾಮದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಶುಕ್ರವಾರವೂ ಮಹಿಳೆಯ ಪತಿ ಮನೆಯಲ್ಲಿ ಇಲ್ಲದಿರುವ ಸಮಯದಲ್ಲಿ ಒಳಹೊಕ್ಕಿದ್ದಾನೆ. ಆಗ ಗ್ರಾಮಸ್ಥರೇ ಅವರಿಬ್ಬರು ಮನೆ ಒಳಗಿದ್ದನ್ನು ಕಂಡು ಮನೆಗೆ ಬೀಗ ಹಾಕಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಶನಿವಾರ ಬೆಳಗ್ಗೆವರೆಗೂ ಅವರಿಬ್ಬರನ್ನು ಕೂಡಿ ಹಾಕಿ ಕೆಲ ಯುವಕರು ಕಾವಲು ಕಾದಿದ್ದಾರೆ. ಶನಿವಾರ ಗ್ರಾಮದ ಹಿರಿಯರು, ಕನಕಗಿರಿ ಪಿಎಸ್ಐ ನೇತೃತ್ವದಲ್ಲಿ ರಾಜಿ ಸಂಧಾನ ಸಭೆ ನಡೆದಿದೆ.
ಮಹಿಳೆಯ ಪತಿರಾಯನೂ ಸಭೆಗೆ ಆಗಮಿಸಿ ‘ನನಗೆ ಹೆಂಡತಿ ಬೇಕಿಲ್ಲ’ ಎಂದು ಸ್ಪಷ್ಟಪಡಿಸಿದ್ದಾನೆ. ಹೀಗಾಗಿ ಆ ಮಹಿಳೆಯನ್ನು ವೀರೇಶನೊಂದಿಗೆ ಮದುವೆ ಮಾಡಿಸಲು ಗ್ರಾಮಸ್ಥರು ನಿಶ್ಚಯಿಸಿದರು. ಅಲ್ಲದೆ, ವೀರೇಶನ 1 ಎಕರೆ ಜಮೀನನ್ನು ಮಹಿಳೆ ಹೆಸರಿಗೆ ಬದಲಾಯಿಸಿ ಮತ್ತು ವೀರೇಶನಿಗೆ 1.50 ಲಕ್ಷ ರೂ. ದಂಡ ವಿಧಿಸಲು ಪಂಚಾಯಿತಿ ತೀರ್ವನಿಸಿದೆ.